ಶಾಲೆಯೊಳಗೊಂದು ರಂಗ ಶಾಲೆ ಅಗತ್ಯ: ಐ.ಕೆ.ಬೊಳುವಾರು
ಕಾಪು, ಆ.4: ಶಾಲೆಯೊಳಗೊಂದು ರಂಗ ಶಾಲೆ ರೂಪುಗೊಳ್ಳಬೇಕಾದ ಅಗತ್ಯವಿದೆ. ಮಕ್ಕಳ ರಂಗಭೂಮಿಯನ್ನು ಗಂಭೀರವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮತ್ತು ಅದರ ಮೂಲಕ ಸತ್ಯದರ್ಶನ ಮಾಡಿಸುವ ಕೆಲಸ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯಬೇಕು ಎಂದು ಮಕ್ಕಳ ರಂಗಭೂಮಿಯ ಹಿರಿಯ ನಿರ್ದೇಶಕ ಐ.ಕೆ.ಬೊಳುವಾರು ಹೇಳಿದ್ದಾರೆ.
ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿನ ಪ್ರೌಢಶಾಲಾ ವಿಭಾಗದ ಬಾಲರಂಗ ಮಕ್ಕಳ ರಂಗಶಾಲೆಯ ಪ್ರಸ್ತುತ ವರ್ಷದ ರಂಗಚಟು ವಟಿಕೆಗಳನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದಿನನಿತ್ಯ ತರಗತಿಗಳಲ್ಲಿ ಪಾಠಗಳನ್ನು ಕೇವಲ ತಾತ್ವಿಕವಾಗಿ ಪುಸ್ತಕಗಳಲ್ಲಿ ಕಲಿಯುತ್ತಿದ್ದೇವೆ. ಅಲ್ಲಿ ಮಕ್ಕಳ ಭಾವನೆಗಳನ್ನು ಅಭಿವ್ಯಕ್ತಿ ಮಾಡಲು ಸ್ವಾತಂತ್ರ ವಿಲ್ಲ. ಆದರೆ ಪ್ರತಿಕ್ಷಣವೂ ಹೊಸತನವನ್ನು ಹುಡುಕುವ, ಹೊಸತನದಿಂದ ನೋಡುವ, ಹೊಸ ರೀತಿಯಲ್ಲಿ ಆಲೋಚಿಸುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ರಂಗಭೂಮಿ ನೀಡುತ್ತದೆ ಎಂದರು.
ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ ಶುಭ ಹಾರೈಸಿದರು. ಶಾಲಾ ಸಂಚಾಲಕ ಕೆ.ವಸಂತ ಮಾಧವ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಾರ್ಯದರ್ಶಿ ರಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲರಂಗ ಮಕ್ಕಳ ನಾಟಕ ಶಾಲೆಯ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಸ್ವಾಗತಿಸಿದರು. ದಿಶಾ ವಂದಿಸಿದರು. ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಐ.ಕೆ. ಬೊಳುವಾರು ರಚನೆಯ ಐನ್ಸ್ಟೈನ್ ನಾಟಕದ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ.