ಅನುಭವ ಭಾಷೆಯ ಮೂಲಕ ಗಟ್ಟಿಗೊಳ್ಳುವುದೇ ಕವಿತೆ: ಎಚ್ಎಸ್ವಿ
ಉಡುಪಿ, ಆ.4: ನಾವು ಪ್ರತಿನಿತ್ಯ ಸುತ್ತಮುತ್ತ ನೋಡಿದ, ಕೇಳಿದ ಅನುಭವವನ್ನು ಭಾಷೆಯ ಮೂಲಕ ಗಟ್ಟಿಗೊಳಿಸುವುದೇ ಕವಿತೆಯಾಗಿದೆ. ಕವಿತೆ ನಾವು ಯೋಚಿಸಿದಷ್ಟು ಸರಳವಲ್ಲ ಎಂದು ಕನ್ನಡ ಖ್ಯಾತ ಕವಿ, ಸಾಹಿತಿ, ವಿಮರ್ಶಕ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಹೇಳಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಎವಿ ಸಭಾಂಗಣ ದಲ್ಲಿ ಆಯೋಜಿಸಲಾದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮತ್ತೊಬ್ಬ ಜನಪ್ರಿಯ ಕವಿ ಬಿ.ಆರ್.ಲಕ್ಷ್ಮಣರಾವ್ರೊಂದಿಗೆ ಪಾಲ್ಗೊಂಡು ಮಾತನಾಡುತಿದ್ದರು.
ಅನುಭವನ್ನು ಸಮಗ್ರವಾಗಿ ನೋಡಿದಾಗ, ಅದರಲ್ಲಿ ಪೂರ್ಣತೆ ಮೂಡಿದಾಗ ಒಳ್ಳೆಯ ಕವಿತೆ ಮೂಡುತ್ತದೆ ಎಂದು ಅವರು ದ.ರಾ.ಬೇಂದ್ರೆ ಅವರ ‘ಬೆಳಗು’ ಕವಿತೆ ‘ಮೂಡಲ ಮನೆಯ... ಮುತ್ತಿನ ನೀರಿನ... ಎರಕಾವ ಹೊಯ್ದ’ವನ್ನು ಉದಾಹರಿಸಿದರು.
ಕವಿತೆಯೊಂದು ಹುಟ್ಟಲು ಕವಿ ಮನನ ಮಾಡಬೇಕು, ಧ್ಯಾನ ಮಾಡಬೇಕು, ಚಿಂತನೆ ಮಾಡಬೇಕು. ಆಗಷ್ಟೇ ಉತ್ತಮ ಕವಿತೆಯೊಂದು ಮೂಡಿಬರಲು ಸಾಧ್ಯ ಎಂದ ಎಚ್ಎಸ್ವಿ, ಕವಿತೆ ಎಂಬುದು ಮೇಲ್ನೋಟಕ್ಕೆ ಸರಳವಾಗಿ ಕಾಣುತ್ತದೆ. ಹಾಡುವಾಗ ಕೇವಲ ಮೂರು ನಿಮಿಷದಲ್ಲಿ ಮುಗಿದುಹೋಗುತ್ತದೆ. ಆದರೆ ಅದು ನಾವು ಗ್ರಹಿಸುವಷ್ಟು ಸರಳವಲ್ಲ ಎಂದರು.
ಇದಕ್ಕೆ ತಾನು 35 ವರ್ಷಗಳ ಹಿಂದೆ ಬರೆದ ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ...ಅರಿತೆವೇನು ನಾವು ನಮ್ಮ ಅಂತರಾಳವ..’ ಕವನವನ್ನು ಉದಾಹರಣೆಯಾಗಿ ನೀಡಿದರು. ಇದು ಮೇಲ್ನೋಟಕ್ಕೆ ತೀರಾ ಸರಳವಾಗಿ, ತುಂಬಾ ಸುಲಭದಲ್ಲಿ ಅರ್ಥವಾಗುವಂತಿದೆ. ಆದರೆ ಯೋಚಿಸಿದಾಗ ತುಂಬಾ ಗಂಭೀರವಾಗಿರುವುದು ಗೊತ್ತಾಗುತ್ತದೆ. ಹೀಗಾಗಿ ಒಳ್ಳೆಯ ಕವಿತೆ ಯೋಚಿಸಿ ದಷ್ಟು ಸರಳವಲ್ಲ ಎಂದರು.
‘ಇದು ನಾನು ಬಸ್ ಪ್ರಯಾಣದಲ್ಲಿದ್ದ ವೇಳೆ ಹುಟ್ಟಿಕೊಂಡ ಕವನ. ತಕ್ಷಣವೇ ಬಸ್ ಕಂಡೆಕ್ಟರ್ರಿಂದ ಪಡೆದ ಟಿಕೇಟ್ ಹಿಂಭಾಗದಲ್ಲಿ ಇದನ್ನು ಬರೆದುಕೊಂಡೆ. ಈ ಕವನವನ್ನು ಇಂದೂ ಹಾಡಲಾಗುತ್ತದೆ. ಇದು ನಿಮ್ಮ ಸ್ನೇಹಿತರು, ಬಂಧುಗಳು, ಪತ್ನಿ, ಗೆಳತಿಯರು ಹಾಗೂ ದೇವರು ಯಾರನ್ನು ಉದ್ದೇಶಿಸಿಯೂ ಆಗಿರಬಹುದು. ಇದನ್ನು ಹೇಳಲು ನಾನು ಮೂರು ಹೋಲಿಕೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಹೀಗೆ ಒಂದು ಕವನ ನಾವು ಭಾವಿಸಿದಷ್ಟು ಸರಳವಾಗಿ ರುವುದಿಲ್ಲ ಎಂದವರು ನುಡಿದರು.
ಹಾಸ್ಯಭರಿತವಾಗಿ ಮಾತನಾಡುವ ಕನ್ನಡದ ಸರಸ ಕವಿ ಬಿ.ಆರ್.ಲಕ್ಷ್ಮಣ ರಾವ್ ಸೇರಿದ ವಿದ್ಯಾರ್ಥಿಗಳ ಮುಂದೆ ತಮ್ಮ ಹಲವು ತಮಾಷೆಯ ಕವಿತೆ ಗಳನ್ನು ಹಾಡುವ (ಸುಶ್ರಾವ್ಯವಾಗಿ) ಹಾಗೂ ಓದುವ ಮೂಲಕ ರಂಜಿಸಿದರು. ‘ನಾನು ಚಿಕ್ಕವನಾಗಿದ್ದಾಗ ಅಪ್ಪ ಹೇಳುತಿದ್ದರು...’, ಸಮಕಾಲೀನ ಸಮಸ್ಯೆಗಳು, ವಿಷಯಗಳನ್ನು ವ್ಯಂಗ್ಯವಾಗಿ ಹೇಳುವ ‘ಎಷ್ಟಾದರೆ ಸಾಕು..’, ‘ದೇವರೆ ಅಗಾಧ ನಿನ್ನ ಕರುಣೆಯ ಕಡಲು..’ ಕವನಗಳನ್ನು ಹಾಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಉಪಸ್ಥಿತ ರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.