ಕೆಎಸ್ಸಿಎ: ಮಂಗಳೂರು ವಲಯದ ಆಶೀಷ್ ನಾಯಕ್ ಉತ್ತಮ ಬೌಲರ್
ಉಡುಪಿ, ಆ.4: ಇಲ್ಲಿನ ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿ ಆಶೀಷ್ ನಾಯಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಹದಿನಾಲ್ಕು ವರ್ಷ ಕೆಳಹರೆಯದ ವಿಭಾಗದ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿ ಅತ್ಯುತ್ತಮ ಬೌಲರ್ ಆಗಿ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸಂಜಯ್ ದೇಸಾಯಿ ಅವರಿಂದ ಅಶೀಷ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಆಶೀಷ್ 2017-18ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 14 ವರ್ಷ ಕೆಳ ಹರೆಯದ ಕರ್ನಾಟಕ ರಾಜ್ಯ ಸಂಭಾವ್ಯ ತಂಡದ ಸದಸ್ಯನಾಗಿದ್ದನು.
ಅಶೀಷ್ ನಾಯಕ್ ಮಣಿಪಾಲ ಸಮೀಪ ಕೆಳ ಪರ್ಕಳದ ರಮೇಶ್ ನಾಯಕ್ ಮತ್ತು ಶಕುಂತಲಾ ನಾಯಕ್ ದಂಪತಿಗಳ ಪುತ್ರ. ವಳಕಾಡು ಶಾಲೆ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ. ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಹೆಗ್ಡೆ ಅಶೀಷ್ನ್ನು ಅಭಿನಂದಿಸಿದ್ದಾರೆ.
Next Story