ಬಂಟ್ವಾಳ: ಪಲ್ಟಿಯಾದ ರಿಕ್ಷಾ; ಆರು ಮಂದಿಗೆ ಗಾಯ
ಬಂಟ್ವಾಳ, ಆ. 4: ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾಯೊಂದು ಉರುಳಿ ಬಿದ್ದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ವಿಟ್ಲದ ಸಾಲೆತ್ತೂರು ರಸ್ತೆಯ ನೆತ್ರಕೆರೆ ಎಂಬಲ್ಲಿ ಶನಿವಾರ ಸಂಭವಿಸಿದೆ.
ಇಲ್ಲಿನ ಕಡಂಬು ನಿವಾಸಿಗಳಾದ ರಾಫಿಯಾ (20), ರಶೀದಾ (23), ಮೋನಪ್ಪ (50), ಗೋಪಾಲಕೃಷ್ಣ (65), ಕೃಷ್ಣಪ್ಪ (65) ಹಾಗೂ ದೇರಣ್ಣ ಗೌಡ (63) ಗಾಯಗೊಂಡವರು.
ಗಾಯಾಳು ರಾಫಿಯಾ ಹಾಗೂ ರಶೀದಾ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಿದರೆ, ಕೃಷ್ಣಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕನ್ನೇರಿಸಿಕೊಂಡು ವಿಟ್ಲದಿಂದ ಕೊಡಂಗಾಯಿ ಕಡೆಗೆ ತೆರಳುತ್ತಿದ್ದಾಗ ಸಾಲೆತ್ತೂರು ರಸ್ತೆಯ ನೆತ್ರಕೆರೆ ಎಂಬಲ್ಲಿ ಆಟೊ ರಿಕ್ಷಾ ಚಾಲಕನ ನಿಯಂತ್ರಣ ಕಳೆದು ರಸ್ತೆಗೆ ಉರುಳಿದೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಆಟೊ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.