ಉಳ್ಳಾಲ-ಪುತ್ತೂರು ನಗರಸಭೆ, ಬಂಟ್ವಾಳ ಪುರಸಭೆ ಚುನಾವಣೆ: ಆ.10 ರೊಳಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ
ಮಂಗಳೂರು, ಆ.4: ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಯ ವಾರ್ಡ್ವಾರು ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆ.10ರವರೆಗೆ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವ ಪ್ರಕ್ರಿಯೆ ಆ.10ರಿಂದ ಆರಂಭಗೊಳ್ಳಲಿದೆ. 17ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆ.20ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ. ಆ.29ರಂದು ಮತದಾನ ನಡೆದು ಸೆ.1 ಮತಎಣಿಕೆ ನಡೆಯಲಿದೆ ಎಂದು ಹೇಳಿದರು.
ಮತದಾರರು, ಮತಗಟ್ಟೆ: ಉಳ್ಳಾಲ ನಗರಸಭೆಯಲ್ಲಿ 44,273, ಪುತ್ತೂರು ನಗರಸಭೆಯಲ್ಲಿ 39,532, ಬಂಟ್ವಾಳ ಪುರಸಭೆಯಲ್ಲಿ 33,640 ಮತದಾರರಿದ್ದಾರೆ. ಒಟ್ಟು 1,17,445 ಮಂದಿ ಮತದಾರರಿದ್ದಾರೆ. ಇವರಲ್ಲಿ 57,847 ಪುರುಷ ಹಾಗೂ 59,420 ಮಹಿಳಾ ಮತದಾರರು ಸೇರಿದ್ದಾರೆ. ಒಟ್ಟು 116 ಮತಗಟ್ಟೆಗಳಿವೆ. ಆ ಪೈಕಿ ಉಳ್ಳಾಲ ನಗರಸಭಾ ವ್ಯಾಪ್ತಿಯ 43 ಮತಗಟ್ಟೆಗಳಲ್ಲಿ 18 ಸೂಕ್ಷ್ಮ, 11 ಅತಿಸೂಕ್ಷ್ಮ, 14 ಸಾಮಾನ್ಯ, ಪುತ್ತೂರು ನಗರಸಭಾ ವ್ಯಾಪ್ತಿಯ 41 ಮತಗಟ್ಟೆಗಳಲ್ಲಿ 27 ಸೂಕ್ಷ್ಮ, (ಅತಿ ಸೂಕ್ಷ್ಮ ಇಲ್ಲ) 14 ಸಾಮಾನ್ಯ, ಬಂಟ್ವಾಳ ಪುರಸಭೆಯ 32 ಮತಗಟ್ಟೆಯಲ್ಲಿ 18 ಸೂಕ್ಷ್ಮ, 14 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಗಡಿಸಲಾಗಿದೆ.
ಮತಯಂತ್ರ, ನೋಟಾ ಬಳಕೆ: ಚುನಾವಣೆಗೆ ಮತಯಂತ್ರ ಬಳಸುವುದರಿಂದ ಅಭ್ಯರ್ಥಿಗಳ ಪೈಕಿ ಯಾರೊಬ್ಬರಿಗೂ ಮತಚಲಾಯಿಸಲು ಇಚ್ಛಿಸದಿರುವ ಮತದಾರರು ಮತಯಂತ್ರದಲ್ಲಿ ಅಳವಡಿಸಿರುವ ನೋಟಾಕ್ಕೆ ಮತ ಚಲಾಯಿಸಲು ಅವಕಾಶವಿದೆ ಎಂದರು. ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರ ಎದುರು ಮಾದರಿ ಮತಯಂತ್ರಗಳ ತಪಾಸಣೆ ನಡೆಸಲಾಗಿದೆ. ಈ ಚುನಾವಣೆಗೆ ಒಟ್ಟು 290 ಮತ ಯಂತ್ರಗಳನ್ನು 116 ಮತಗಟ್ಟೆಗೆ ಹಂಚಿಕೆಯಾಗಲಿದೆ. ಶೇ.5ರಷ್ಟು ಹೆಚ್ಚುವರಿ ಮತಯಂತ್ರಗಳು ಇರುತ್ತವೆ. ಮತಯಂತ್ರಗಳನ್ನು ಮತಗಟ್ಟೆಗೆ ಸಿದ್ಧಪಡಿಸುವ ಕೆಲಸ ಮಾತ್ರ ಬಾಕಿ ಇದೆ ಎಂದು ಕುಮಾರ್ ತಿಳಿಸಿದರು.
ಮತ ಎಣಿಕೆ ಎಲ್ಲೆಲ್ಲಿ?: ಆ.29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆಯು ಸೆ.1ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಉಳ್ಳಾಲ ನಗರಸಭೆಯ ಮತ ಎಣಿಕೆಯು ಭಾರತ್ ಹೈಸ್ಕೂಲ್ ಉಳ್ಳಾಲ, ಪುತ್ತೂರು ನಗರಸಭೆಯ ಮತ ಎಣಿಕೆಯು ಪುತ್ತೂರು ತಾಲೂಕು ಕಚೇರಿ, ಬಂಟ್ವಾಳ ಪುರಸಭೆಯ ಮತ ಎಣಿಕೆಯು ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆಯಲಿದೆ.
ಚುನಾವಣಾಧಿಕಾರಿಗಳ ನೇಮಕ: ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣಾಧಿಕಾರಿಗಳು ಆ.10ರಿಂದ ಆ.17ರವರೆಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೂರ್ವಾಹ್ನ 11ರಿಂದ ಸಂಜೆ 3 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.
ನೀತಿ ಸಂಹಿತೆ ಅನುಷ್ಠಾನ: ಚುನಾವಣಾ ವೇಳಾಪಟ್ಟಿ ಘೋಷಣೆಯಾದ ತಕ್ಷಣ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀತಿ ಸಂಹಿತೆ ಅನುಷ್ಠಾನ ಸಮಿತಿ ಈ ಬಗ್ಗೆ ನಿಗಾ ಇರಿಸಲಿದೆ. ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಠಾಣೆಗಳಲ್ಲಿ ದೂರು ದಾಖಲಿಸಲು ಸೂಚನೆ ನೀಡಲಾಗಿದೆ. ಅಕ್ರಮ ಮದ್ಯ ಸಾಗಾಟ-ಮಾರಾಟ, ಹಂಚಿಕೆ ಇತ್ಯಾದಿಗಳನ್ನು ತಡೆಗಟ್ಟುವ ಬಗ್ಗೆ ತಂಡಗಳನ್ನು ರಚಿಸಲಾಗಿದೆ ಎಂದರು.
ಮೀಸಲಾತಿ ಬದಲಿಗೆ ಅವಕಾಶ : ನಗರಸಭೆ, ಪುರಸಭೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ವ್ಯಾಪ್ತಿಯಲ್ಲಿ ಆ ಮೀಸಲಾತಿಯ ಅಭ್ಯರ್ಥಿ ನಾಮಪತ್ರ ಸಲ್ಲಿಸದಿದ್ದಲ್ಲಿ ಪರಿಶಿಷ್ಟ ಪಂಗಡದವರಿಗೆ ಸ್ಪರ್ಧೆಗೆ ಅವಕಾಶವಿದೆ. ಅದೇ ರೀತಿ ಪರಿಶಿಷ್ಟ ಪಂಗಡ ವ್ಯಾಪ್ತಿಯಲ್ಲಿ ಆ ಮೀಸಲಾತಿಗೆ ಸಂಬಂಧಿಸಿದವರು ನಾಮಪತ್ರ ಸಲ್ಲಿಸದಿದ್ದಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಪರ್ಧೆಗೆ ಅವಕಾಶವಿದೆ. ಇದೇ ಮಾದರಿ ಹಿಂದುಳಿದ ವರ್ಗ (ಎ) ಹಾಗೂ (ಬಿ)ಗೂ ಅನ್ವಯಿಸಲಿದೆ.
ಶೇ.50 ಮಹಿಳಾ ಮೀಸಲಾತಿ: ಈವರೆಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲಾಗುತ್ತಿತ್ತು, ಈ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ.