ಸಹಕಾರಿ ಕ್ಷೇತ್ರಕ್ಕೆ ವಿಧಾನಸಭೆ-ವಿಧಾನಪರಿಷತ್ನಲ್ಲಿ ಸ್ಥಾನ ಮೀಸಲಿಡಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಮೊಳಹಳ್ಳಿ ಶಿವರಾವ್ ಜನ್ಮದಿನಾಚರಣೆ
ಮಂಗಳೂರು, ಆ.4: ರಾಜ್ಯದ ಅಭಿವೃದ್ಧಿಗೆ ವಿಶಿಷ್ಟ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿರುವ ಸಹಕಾರ ಕ್ಷೇತ್ರಗಳಿಗೆ ಆದ್ಯತೆ ನೀಡುವ ಸಲುವಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಸ್ಥಾನಗಳನ್ನು ಮೀಸಲಿಡಬೇಕು. ಇದಕ್ಕಾಗಿ ಸಹಕಾರಿ ಧುರೀಣ ಎಸ್.ಎಲ್.ಭೋಜೇಗೌಡ ಧ್ವನಿ ಎತ್ತಬೇಕು ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳಗಳ ನಿಯಮಿತ ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ ಲಿ. ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಎಸ್ಸಿಡಿಸಿಸ ಬ್ಯಾಂಕ್ನ ಸಭಾಂಗಣದಲ್ಲಿ ನಡೆದ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ 138ನೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರ ರಾಜ್ಯ-ರಾಷ್ಟ್ರಮಟ್ಟದಲ್ಲಿ ಬೆಳೆಯಲು ಮೊಳಹಳ್ಳಿ ಶಿವರಾವ್ ಕಾರಣ. ಅವರು ಅಂದು ಭದ್ರಬುನಾದಿ ಹಾಕಿದ ಕಾರಣದಿಂದಲೇ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯವಾಗಿದೆ. ಸಹಕಾರ ಕ್ಷೇತ್ರವು ರೈತರ ಜೀವನಾಡಿಯಾಗಿದ್ದು, ರೈತರ-ಸಹಕಾರಿಗಳ ಪರ ಧ್ವನಿ ಎತ್ತುವ ಸಲುವಾಗಿ ರಾಜ್ಯ ವಿಧಾನಸಭೆ-ವಿಧಾನ ಪರಿಷತ್ನಲ್ಲಿ ಸ್ಥಾನ ಮೀಸಲಿಡುವ ಅಗತ್ಯವಿದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮನವಿ ಮಾಡಿದರು.
ಸಹಕಾರ ಕ್ಷೇತ್ರದಲ್ಲಿ ಸಣ್ಣಪುಟ್ಟ ತಪ್ಪುಗಳಾದರೆ ಎತ್ತಿ ತೋರಿಸಲಾಗುತ್ತದೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರನ್ನೂ ತುಳಿಯಲಾಗುತ್ತಿದೆ. ರೈತರ ಸಾಲಮನ್ನಾ ಪ್ರಕ್ರಿಯೆಯಲ್ಲಿ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದೆ. ಆರ್ಬಿಐ ಕೂಡ ವಾಣಿಜ್ಯ ಬ್ಯಾಂಕ್ಗಳ ನೀಡಲಾಗುವ ಸಹಕಾರವನ್ನು ಸಹಕಾರ ಕ್ಷೇತ್ರದ ಬ್ಯಾಂಕ್ಗೆ ನೀಡುತ್ತಿಲ್ಲ ಎಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಸರಕಾರವು ಸಾಲ ಮನ್ನಾ ಮಾಡುವಾಗ ನಿಯತ್ತಿನಿಂದ ಸಾಲ ಮನ್ನಾ ಮಾಡಿದವರಿಗೂ ಮಹತ್ವ ಕೊಡಬೇಕಿದೆ. ನವೋದಯ ಸದಸ್ಯರಿಗೆ ಶೇ. 4ರ ಅಥವಾ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಕ್ರಮವನ್ನು ಮುಂದುವರಿಸಬೇಕು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ ಲಿ.ನ ಅಧ್ಯಕ್ಷ ಹರೀಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಭೋಜೇಗೌಡ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಾಜೀವಿ ಆರ್.ರೈ, ಯೂನಿಯನ್ನ ಉಪಾಧ್ಯಕ್ಷೆ ಸುಂದರ ಗೌಡ ಇಚ್ಚಿಲ, ಬೆಳಪು ದೇವಿಪ್ರಸಾದ್ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು.