ಪೋಷಕರ ಮೂಲಕ ಶೈಕ್ಷಣಿಕ ಅರಿವು ಮೂಡಿಸುವ ಕೆಲಸವಾಗಲಿ: ಶೇಷಶಯನ ಕಾರಿಂಜ
ಬಂಟ್ವಾಳ: ಎಸ್ಸಿ-ಎಸ್ಟಿ ಶಿಕ್ಷಕರ ವಿಭಾಗೀಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ
ಬಂಟ್ವಾಳ, ಆ. 5: ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪೋಷಕರ ಮೂಲಕ ಶೈಕ್ಷಣಿಕ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಸಾ.ಶಿ.ಇ ಉಡುಪಿ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದ್ದಾರೆ.
ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಇದರ ವತಿಯಿಂದ ದ.ಕ., ಉಡುಪಿ ಹಾಗೂ ಕೊಡಗು ವಿಭಾಗೀಯ ಮಟ್ಟದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಹುದ್ದೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯ ಹಿಂದುಳಿದಿರುವುದು ಖೇದಕರ ಎಂದು ಅವರು, ತಮಗೆ ಸಿಗುವ ಸೌಲಭ್ಯಗಳನ್ನು ಹಕ್ಕುಗಳೊಂದಿಗೆ ಹಾಗೂ ಶೈಕ್ಷಣಿಕ ಸೇವೆಯನ್ನು ಕರ್ತವ್ಯದೊಂದಿಗೆ ನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದು ನುಡಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟೇಶಯ್ಯ ವಿ.ಟಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂಘನೆಯ ನಡೆದು ಬಂದ ದಾರಿ, ಹೋರಾಟ, ಸರಕಾರದ ಮೀಸಲಾತಿ-ಯೋಜನೆಯ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಂಘಟನೆಯ ಜಿಲ್ಲಾಧ್ಯಕ್ಷ ಆಂಜನೇಯ ಸ್ವಾಮಿ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಶಾರದಾ ಪ್ರೌಢ ಶಾಲೆಯ ಸಂಚಾಲಕ ಜನಾರ್ದನ ಭಟ್ ಮುಖ್ಯ ಅತಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಸರಕಾರಿ ಪಾಲಿಟೆಕ್ನಿಕ್ನ ಉಪನ್ಯಾಸಕ ಭಾಸ್ಕರ್ ವಿಟ್ಲ ಅವರು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಂಘಟನೆಯ ಉಪಾಧ್ಯಕ್ಷೆ ಸುಮಿತ್ರಾ ದುರ್ಗಿ, ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಭೋಜ, ವಿಭಾಗೀಯ ಮಟ್ಟದ ಪದಾಧಿಕಾರಿಗಳಾದ ಸುಮಿತ್ರಾ, ರಾಮಕೃಷ್ಣ, ಕುಮಾರ್, ಧನರಾಜ್, ಜಯಮ್ಮಾ, ಸುರೇಂದ್ರ, ಎಂ.ಡಿ.ಹುಚ್ಚಪ್ಪ, ರಾಜು, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನ 10ನೆ ತರಗತಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರಶಿಕ್ಷಾ, ಸ್ಪೂರ್ತಿ, ಶ್ರೇಯಾ, ಸುಧಾಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಸಾ.ಶಿ.ಇ ಉಡುಪಿ ಉಪನಿರ್ದೇಶಕ ಶೇಷಶಯನ ಕಾರಿಂಜ ಅವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರ ಶೈಕ್ಷಣಿಕ ಕುಂದು ಕೊರತೆಗಳ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಯಿತು. ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಮಾದೇಶ ತಂಡ ಪ್ರಾರ್ಥಿಸಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಧನರಾಜ್ ಡಿ.ಆರ್ ಸ್ವಾಗತಿಸಿ, ಸಹಕರಿಸಿದರು. ಲಿಂಗರಾಜು ವಂದಿಸಿದರು. ರಾಜೇಶ್ ನಿರೂಪಿಸಿದರು.