ಸಂಸ್ಕೃತಿಯನ್ನು ಉಳಿಸಲು ಕಲೆಗಳಿಗೆ ಅನುದಾನ ಅಗತ್ಯ: ಮೋಹನ್ ಆಳ್ವ
ಉಡುಪಿ, ಆ.5: ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿರುವ ನೃತ್ಯ ಸಂಗೀತಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ಅನುದಾನ ನೀಡುವ ಮೂಲಕ ಕಲೆಯನ್ನು ಬೆಳೆಸಬೇಕಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಹೆಜ್ಜೆ ಗೆಜ್ಜೆ ಪ್ರತಿಷ್ಠಾನದ ರಜತ ಮಹೋತ್ಸವ ಪ್ರಯುಕ್ತ ರವಿವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಿದ ಗುರುಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶಾಸ್ತ್ರೀಯ ನೃತ್ಯ ಪ್ರಾಕಾರ ಗಳು ಇಂದು ಕೆಲಸ ನಿರ್ವಹಿಸುತ್ತಿವೆ. ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಮನಸ್ಸನ್ನು ಕಟ್ಟುವ, ಗಟ್ಟಿಗೊಳಿಸುವ, ಸಂಸ್ಕಾರ ಹೇಳಿಕೊಡುವ ಕಲಾ ಪ್ರಾಕಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ನೃತ್ಯ ಗುರುಗಳಾದ ವಿದುಷಿ ನಂದಿನಿ ಈಶ್ವರ್ ಮೈಸೂರು, ಡಾ.ಶೀಲಾ ಶ್ರೀಧರ್, ವಿದುಷಿ ಪದ್ಮಿನಿ ಶ್ರೀಧರ್ ಬೆಂಗಳೂರು, ಡಾ.ರೋಹಿತ ಈಶ್ವರ್ ಮೈಸೂರು, ವಿದ್ವಾನ್ ಪಿ.ಪ್ರವೀಣ್ ಕುಮಾರ್ ಬೆಂಗಳೂರು, ವಿದುಷಿ ಪ್ರತಿಭಾ ಎಂ.ಎಲ್.ಸಾಮಗ ಉಡುಪಿ ಅವರನ್ನು ‘ನೃತ್ಯ ನಿಧಿ’ ಬಿರುದಿನೊಂದಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಶಿಕಾಂತ್ ಮತ್ತು ತಂಡ ರಚಿಸಿದ ಹೆಜ್ಜೆ ಗೆಜ್ಜೆ.ಕಾಮ್ ವೆಬ್ಸೈಟ್ನ್ನು ಅನಾವರಣಗೊಳಿಸಲಾಯಿತು. ರಾಮಕೃಷ್ಣ ಹೆಗಡೆ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ಯಶಾ ರಾಮಕೃಷ್ಣ ಸಮ್ಮಾನ ಪತ್ರ ವಾಚಿಸಿದರು. ಶ್ರೀನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಬಿ. ಪ್ರಭಾಕರ್ ವಂದಿಸಿದರು. ದೀಕ್ಷಾ ರಾಮಕೃಷ್ಣ ಕಾರ್ಯ ಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭ: ಬೆಳಗ್ಗೆ ರಾಜ್ಯದ ಪ್ರಸಿದ್ಧ ಹಿರಿಯ ಭರತನಾಟ್ಯ ಗುರುಗಳಿಂದ ಭರತನಾಟ್ಯ ಶೈಲಿಗಳು ಎಂಬ ವಿಷಯದ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ನಾರಾಯಣ ಭಟ್ ಉಡುಪಿ ಉದ್ಘಾಟಿಸಿದರು.
ಪರ್ಯಾಯ ಪಲಿಮಾರು ಮಠದ ವ್ಯವಸ್ಥಾಪಕ ಪಿ.ಬಲರಾಮ ಭಟ್, ವಿದುಷಿ ಪ್ರತಿಭಾ ಎಂ.ಎಲ್.ಸಾಮಗ, ಪಿ.ಪ್ರವೀಣ್ ಕುಮಾರ್, ರಾಮಕೃಷ್ಣ ಹೆಗ್ಡೆ, ದಿಶಾ ರಾಮಕೃಷ್ಣ, ಶೀಲಾ ಶ್ರೀಧರ್, ಪದ್ಮಿನಿ ಶ್ರೀಧರ್ ಉಪಸ್ಥಿತರಿದ್ದರು. ಯಶಾ ರಾಮಕೃಷ್ಣ ಹೆಗ್ಡೆ ಸ್ವಾಗತಿಸಿದರು. ಅಂಜನಾ ಸುಧಾಕರ್ ವಂದಿಸಿದರು. ಪ್ರೀತಿ ರಾವ್ ಕಾರ್ಯಕ್ರಮ ನಿರೂಪಿಸಿದರು.