ಗಡ್ಡೆಗೆಣಸುಗಳಲ್ಲೂ ರೋಗನಿರೋಧಕ ಶಕ್ತಿ: ಡಾ.ಮಮತಾ
ಉಡುಪಿ, ಆ.5: ಆಷಾಢ ಮಾಸದಲ್ಲಿ ಮನೆಯ ಸುತ್ತಮುತ್ತ ಪರಿಸರದಲ್ಲಿ ಸಿಗುವ ಗಡ್ಡೆಗೆಣಸುಗಳಲ್ಲಿ ಯಾವುದೇ ರಾಸಾಯನಿಕಗಳಿರುವುದಿಲ್ಲ. ಅಲ್ಲದೇ ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ಕುತ್ಪಾಡಿ ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ನವೀನ್ ಹೇಳಿದ್ದಾರೆ.
ಉಡುಪಿ ತುಳುಕೂಟದ ವತಿಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಆಟಿದ ಕೂಟ ಕಾರ್ಯಕ್ರಮವನ್ನು ಉ ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದೆಲ್ಲಾ ಆಟಿ ತಿಂಗಳೆಂದರೆ ಬಹು ಕಷ್ಟದ ದಿನ. ಜಡಿ ಮಳೆ, ಸಂಪರ್ಕ ಕೊಂಡಿ ಕಡಿತವಾಗಿರುತಿದ್ದ ಕಾಲ. ರೈತಾಪಿ ವರ್ಗ ಕೃಷಿ ಚಟುವಟಿಕೆ ಮುಗಿಸಿ ಸುತ್ತಲಿನ ಪರಿಸರದಲ್ಲಿ ಸಿಗುವ ಗಡ್ಡೆ ಗೆಣಸು, ಹಸಿರು ತರಕಾರಿಗಳಿಂದ ಖಾದ್ಯ ತಯಾರಿಸಿ ತಿನ್ನುತ್ತಿದ್ದರು. ಹೀಗಾಗಿ ಆಗಿನ ಬಹುತೇಕ ಖಾದ್ಯಗಳು ಆರೋಗ್ಯ ವರ್ಧಕಗಳಾಗಿರುತಿದ್ದವು ಎಂದರು.
ಆದರೆ ಈಗ ಆಧುನಿಕತೆಯ ಸ್ಪರ್ಶವಾಗಿ ಆಹಾರ ಪದ್ದತಿಗಳು ಬದಲಾಗಿವೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಮಿಶ್ರಿತ ಆಹಾರವನ್ನೇ ಹೆಚ್ಚೆಚ್ಚು ಸೇವಿಸಿ, ಆರೋಗ್ಯವನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತಿತಿದ್ದೇವೆ. ತಂಜಕ್ ಸೊಪ್ಪಿನಲ್ಲಿ ಹಸಿವು ಹೆಚ್ಚಿಸುವ, ಬಾಳೆದಿಂಡಿನಲ್ಲಿ ಮೂತ್ರಕೋಶ ಸಮಸ್ಯೆಗೆ ಪರಿಹಾರ ನೀಡುವ ಗುಣಗಳಿದ್ದವು. ಹುರುಳಿ, ಕಣಲೆ ಸಹಿತ ಇತ್ಯಾದಿಗಳಲ್ಲಿ ಗಿಡಮೂಲಿಕೆಯ ಅಂಶಗಳಿದ್ದು, ಆರೋಗ್ಯಕ್ಕೆ ಪೂರಕವಾಗಿರುತ್ತವೆ ಎಂದರು.
ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಗಂಗಾಧರ ಕಿದಿಯೂರು, ಸರೋಜಾ ಉಪಸ್ಥಿತರಿದ್ದರು. ಆಟಿದ ಕೂಟದ ಸಂಚಾಲಕಿ ವೀಣಾ ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯಶೋಧಾ ಕೇಶವ ಪ್ರಾರ್ಥಿಸಿ ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.