ಕಾಂಗ್ರೆಸ್ನ್ನು ನಿರ್ನಾಮ ಮಾಡುವ ಪಕ್ಷ ಹುಟ್ಟಿ ಬಂದಿಲ್ಲ: ಜಯಮಾಲ
ಉಡುಪಿ, ಆ.5: ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವಂತಹ ಇನ್ನೊಂದು ಪಕ್ಷ ಹುಟ್ಟಿ ಬಂದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತದೆ. ಚುನಾವಣೆ ಗೆಲ್ಲುವುದಕ್ಕೆ ಯಾರ ಕೈಕಾಲು ಮುರಿಯ ಬೇಕಾಗಿಲ್ಲ. ಒಂದಷ್ಟು ಸಂಘಟನೆ ಮಾಡಿ ನಾವೆಲ್ಲ ಒಂದಾಗಬೇಕಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಹೇಳಿದ್ದಾರೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ರವಿವಾರ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಮಾತು ಕಡಿಮೆ ಮಾಡಿ, ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದರ ಕುರಿತು ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು. ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುವುದರಲ್ಲಿ ಮಾತ್ರ ನನಗೆ ನಂಬಿಕೆ ಇರುವುದು ಎಂದು ಅವರು ಹೇಳಿದರು.
ಜಿಲ್ಲೆಯ ಜನರಿಗೆ ಬೇಕಾದ ಸವಲತ್ತು, ಯೋಜನೆ, ಅಭಿವೃದ್ಧಿಯನ್ನು ತಲುಪಿ ಸುವ ಕೆಲಸ ಮಾಡಬೇಕಾಗಿದೆ. ಯಾರ ಮನಸ್ಸಿಗೂ ನೋವಾಗದಂತೆ ನಡೆದು ಕೊಳ್ಳಬೇಕು. ಎಲ್ಲರನ್ನು ಸಂಘಟನೆಯ ಮೂಲಕ ಕರೆದುಕೊಂಡು ಹೋಗ ಬೇಕು. ಸಾಮರಸ್ಯ ಹಾಗೂ ನಂಬಿಕೆಯಿಂದ ಕಾಂಗ್ರೆಸ್ ಪಕ್ಷವು ಮಹಿಳೆಯರು, ಮಕ್ಕಳು, ವೃದ್ಧರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಈ ಸಮಾಜದಲ್ಲಿ ಸಮಾವಾಗಿ ಬಾಳುವಂತೆ ಮಾಡಿದೆ ಎಂದರು.
ನಮಗೆ ಬೇಕಾಗಿರುವುದು ಜಿಲ್ಲೆಯ ಅಭಿವೃದ್ಧಿ, ಶಾಂತಿ, ನೆಮ್ಮದಿ. ಒಬ್ಬರಿಂದ ಏನೂ ಆಗಲ್ಲ. ನಾವೆಲ್ಲ ಒಂದಾದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಪ್ರತಿಯೊಬ್ಬರ ಸಹಕಾರ ಬೇಕು. ಈ ಜಿಲ್ಲೆಯಲ್ಲಿ ವಾರಕ್ಕೆ ಮೂರು ದಿನ ಇರು ತ್ತೇನೆ. ನಾಯಕರು, ಪಕ್ಷ ಹಾಗೂ ಜನರ ಹಿತ ಮುಖ್ಯ. ಪಕ್ಷ ತಾಯಿಯಾದರೆ ಅದರ ಶಕ್ತಿ ಕಾರ್ಯಕರ್ತರು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡರಾದ ಜಿ.ಎ. ಬಾವಾ, ಅಮೃತ್ ಶೆಣೈ, ದೇವಿಪ್ರಸಾದ್ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಅಝೀಝ್ ಹೆಜಮಾಡಿ, ನವೀನ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
‘ನೀವು ಗೆದ್ದಿದ್ದರೆ ನಾನು ಸಚಿವೆಯಾಗುತ್ತಿರಲಿಲ್ಲ’
‘ನಾನು ಸಚಿವನಾಗುತ್ತೇನೆ ಎಂಬುದು ಕನಸು ಮನಸ್ಸಲ್ಲಿಯೂ ಎಣಿಸಿರಲಿಲ್ಲ. ವಿನಯ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ ಅಥವಾ ಮಧು ಬಂಗಾರಪ್ಪ ಸೇರಿದಂತೆ ಬೇರೆ ಯಾವುದೇ ಬಿಲ್ಲವ ಮುಖಂಡ ಈ ಬಾರಿಯ ಚುನಾವಣೆ ಯಲ್ಲಿ ಗೆದ್ದಿದ್ದರೆ ಖಂಡಿತವಾಗಿಯೂ ನನಗೆ ಈ ಸಚಿವ ಸ್ಥಾನ ಸಿಗುತ್ತಿರಲಿಲ್ಲ ಎಂದು ಸಚಿವೆ ಜಯಮಾಲ ತಿಳಿಸಿದರು.
ನೀವು ಸೋತು ನಮ್ಮನ್ನು ಗೆಲ್ಲಿಸಿದ್ದೀರಿ. ಆ ಮೂಲಕ ಹೆಣ್ಣು ಮಗಳಿಗೆ ಅವಕಾಶ ಕೊಟ್ಟಿದ್ದೀರಿ. ನಿಮ್ಮ ಬಗ್ಗೆ ಅಪಾರ ಗೌರವ ಇದೆ. ಇಲ್ಲದಿದ್ದರೆ ಹೆಣ್ಣು ಮಗಳಿಗೆ ಈ ಅವಕಾಶ ಸಿಗುತ್ತಿರಲಿಲ್ಲ. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯಗೆ ಸಾಮಾಜಿಕ ನ್ಯಾಯದ ಬಗ್ಗೆ ಸಾಕಷ್ಟು ನಂಬಿಕೆ ಇದೆ. ಅವರಿಬ್ಬರು ಮಹಿಳೆ ಮತ್ತು ಒಂದು ಜನಾಂಗಕ್ಕೆ ಆದ್ಯತೆ ನೀಡಿರುವುದರಿಂದ ನನಗೆ ಈ ಅವಕಾಶ ನೀಡಲಾಗಿದೆ ಎಂದರು.