ಸುಂಕ ವಸೂಲಿ ಮೂಲಕ ಹಗಲು ದರೋಡೆ: ಮುನೀರ್ ಕಾಟಿಪಳ್ಳ
ಹೆದ್ದಾರಿ ಅವ್ಯವಸ್ಥೆ ಖಂಡಿಸಿ ಡಿವೈಎಫ್ಐಯಿಂದ ತಲಪಾಡಿ ಚಲೋ
ಉಳ್ಳಾಲ, ಆ. 5: ವಾಹನ ಸವಾರರು ರಸ್ತೆಗೆ ತೆರಿಗೆ ಕಟ್ಟಿದ ನಂತರ ಸುಂಕ ಕಟ್ಟುವುದೇ ಅಕ್ರಮ ಹಾಗೂ ಕಾನೂನು ವಿರೋಧಿ. ವಾಹನ ಖರೀದಿಸು ವಾಗಲೇ ತೆರಿಗೆ ಕಟ್ಟಲಾಗುತ್ತದೆ. ಜೊತೆಗೆ ಮಾಸಿಕ ಹಾಗೂ ವಾರ್ಷಿಕವಾಗಿ ವಿವಿಧ ರೀತಿಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತಾರೆ. ಆದರೆ ಸಾರ್ವಜನಿಕ ಸೊತ್ತುಗಳು ವ್ಯಾಪಾರೀಕರಣವಾಗುವ ಇಂತಹ ಸಂದರ್ಭ ರಸ್ತೆಗಳನ್ನು ಖಾಸಗೀಕರಣಗೊಳಿಸಿ ಟೋಲ್ ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಮಾಡುತ್ತಿರುವುದು ಪೊಲೀಸರು ಮತ್ತು ಜಿಲ್ಲಾಡಳಿತದ ಎದುರಲ್ಲೇ ನಡೆಯುತ್ತಿರುವ ಹಗಲು ದರೋಡೆ ಮತ್ತು ಡಕಾಯಿತಿ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅವರು ಪಂಪ್ ವೆಲ್ , ತೊಕ್ಕೊಟ್ಟು, ತಲಪಾಡಿ ಹೆದ್ದಾರಿ ದುರವಸ್ಥೆಯ ವಿರುದ್ಧ ಸರ್ವಿಸ್ ರಸ್ತೆಗಳನ್ನು ತಕ್ಷಣ ಪೂರ್ಣಗೊಳಿಸಲು ಒತ್ತಾಯಿಸಿ ತಲಪಾಡಿಯಲ್ಲಿ ಅಕ್ರಮ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ತೊಕ್ಕೊಟ್ಟುವಿನಿಂದ ತಲಪಾಡಿ ಟೋಲ್ ವರೆಗೆ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಹಮ್ಮಿಕೊಂಡ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದರು.
ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆ ಕಾಟಾಚಾರದ ಹೋರಾಟ ಆಗಿರದೆ, ಜನರ ನಿಜವಾದ ಸಮಸ್ಯೆ ತೀವ್ರ ಆದ ಹಿನ್ನೆಲೆಯಲ್ಲಿ ಹೋರಾಟವನ್ನು ಆರಂಭಿಸಿದೆ. 60 ಕಿ.ಮೀ ದೂರದಲ್ಲಿ ಟೋಲ್ ಇರಬಾರದು ಅನ್ನುವ ಕಾನೂನು ಇದೆ. ಆದರೆ ಹೆದ್ದಾರಿ ಪ್ರಾಧಿಕಾರದವರೇ ಹಲವೆಡೆ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹಿಸುವ ಗುತ್ತಿಗೆಯನ್ನು ಖಾಸಗಿಯವರಿಗೆ ವಹಿಸಿರುವುದು ವಿಪರ್ಯಾಸ. ಶೇ.75 ರಷ್ಟು ರಸ್ತೆ ಕಾಮಗಾರಿ ಪೂರ್ಣ ಗೊಂಡ ಬಳಿಕ ಸುಂಕ ಸಂಗ್ರಹಿಸಬೇಕು ಅನ್ನುವ ಕಾನೂನಿದೆ. ಜೊತೆಗೆ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಆದರೆ ನಂತೂರಿನಿಂದ ತಲಪಾಡಿವರೆಗೆ ಸರ್ವಿಸ್ ರಸ್ತೆಯೇ ನಿರ್ಮಾಣವಾಗಿಲ್ಲ. ಫ್ಲೈ ಓವರ್ ಕಾಮಗಾರಿ ಸಂಪೂರ್ಣವಾಗಿ ನಿಂತಿದೆ. ಆದರೂ ಸುಂಕ ವಸೂಲಿ ನಡೆಸಲಾಗುತ್ತಿರುವುದು ಹಗಲು ದರೋಡೆಯಾಗಿದೆ. ಪೊಲೀಸರು ಮತ್ತು ಜಿಲ್ಲಾಡಳಿತದ ಎದುರು ಮಾಡುತ್ತಿರುವ ಡಕಾಯಿತಿ ಮತ್ತು ಹಗಲು ದರೋಡೆಯಾಗಿದೆ. ಅಲ್ಲಲ್ಲಿ ಸಂಸದ ನಳಿನ್ ಕಟೀಲ್ ಅವರು ನಂ.1 ಸಂಸದನೆಂಬ ಫ್ಲೆಕ್ಸ್ ಅನ್ನು ಹಾಕಲಾಗಿತ್ತು. ಮೊದಲಿಗೆ ತೊಕ್ಕೊಟ್ಟು ಫ್ಲೈಓವರ್ ಮತ್ತು ತಲಪಾಡಿ ಟೋಲ್ ಗೇಟಿನಲ್ಲಿ ಬ್ಯಾನರ್ ಹಾಕಬೇಕಿತ್ತು. ಕೆಲ ದಿನಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಸಂಸದ ನಳಿನ್ ಅರೆಬರೆ ಹಿಂದಿಯಲ್ಲಿ ಅವರನ್ನು ತರಾಟೆಗೆ ಪಡೆದುಕೊಂಡು ರಸ್ತೆ ಕಾಮಗಾರಿ ಸರಿಯಾಗದೇ ಇದ್ದಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸುವುದಾಗಿ ಗಡುವು ನಿಗದಿ ಮಾಡಿದ್ದರು. ಆದರೆ ಬರೀ ಡೈಲಾಗ್ ಕಿಂಗ್ ಆಗಿರುವ ಸಂಸದರ ಮಾತಿಗೆ ಬೆಲೆಯೇ ಇಲ್ಲವಾಗಿದೆ. ಗಡುವಿನ ದಿನಾಂಕ ಮುಗಿದರೂ ಟೋಲ್ ನಿರಂತರವಾಗಿ ಸಂಗ್ರಹಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ನವಯುಗ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸದ ಸಂಸದರ, ಸರಕಾರದ ಮೇಲೆ ಅನುಮಾನ ಹುಟ್ಟುವಂತಾಗಿದೆ. ರಾಜ್ಯ ಸರಕಾರಕ್ಕೂ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವ ಅಧಿಕಾರ ಇದೆ. ಸದ್ಯ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಅವರದೇ ಕ್ಷೇತ್ರದಲ್ಲಿ ಆಗುತ್ತಿರುವ ಹಗಲು ದರೋಡೆಯನ್ನು ನಿಲ್ಲಿಸಲು ಸಾಧ್ಯವಿದೆ. ಸೂಪರ್ ಪವರ್ ದೇಶದಲ್ಲೇ ಇದ್ದೇವೆ ಅನ್ನುವ ಪವರ್ಫುಲ್ ಪ್ರಧಾನಿಯಡಿ ಇರುವ ನಂ. 1 ಸಂಸದನ ಕ್ಷೇತ್ರದಲ್ಲಿ ನಂತೂರು, ಮೂಡುಬಿದಿರೆ, ಕಾರ್ಕಳ , ಪಂಪ್ ವೆಲ್, ತೊಕ್ಕೊಟ್ಟು ಪ್ರದೇಶದಲ್ಲಿ ನಿರಂತರ ಬ್ಲಾಕ್ ಆಗುತ್ತಿರುವುದೇ ಅಭಿವೃದ್ಧಿಯಾಗಿದೆ. ಜಿಲ್ಲೆಯ ಹೆದ್ದಾರಿ ಅವ್ಯವಸ್ಥೆಯಿಂದ ಆದ ಹಲವರ ಸಾವಿಗೆ ನ್ಯಾಯವಿಲ್ಲ. ಕೋಮುಗಲಭೆಯಲ್ಲಿ ಸಾವನ್ನಪ್ಪಿದ ತಕ್ಷಣ ಸಂಸದರ ಬೆಂಬಲಿಗರು ಏಳುತ್ತಾರೆ. ಹೆಣದಲ್ಲೂ ರಾಜಕೀಯ ಮಾಡುವ ಸಂಸದರು ತಮ್ಮ ಬೇಜವಾಬ್ದಾರಿಯಿಂದ ಆದ ಸಾವುಗಳಿಗೆ ಪರಿಹಾರವನ್ನು ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಂಡವರಿದ್ದಾರೆ, ಕಾಲೇಜು, ಶಾಲೆಗೆ ತಲುಪಲು ಅಸಾಧ್ಯವಾದವರಿದ್ದಾರೆ, ವಾಹನಗಳು ಹಾಳಾಗುತ್ತಿವೆ, ಆರೋಗ್ಯ ಹಾಳಾಗಿದೆ, ವಾಹನ ಸವಾರರು ಸಂಪಾದನೆಯ ಬಹುಭಾಗ ಟೋಲ್ ಮತ್ತು ರಸ್ತೆ ಅವ್ಯವಸ್ಥೆಗೆ ವಿನಿಯೋಗಿಸುವ ಸ್ಥಿತಿಯಿದೆ. ಸದ್ಯ ಸ್ಥಳೀಯರಿಗೆ ಸುಂಕ ತೆಗೆಯದೆ , ಜನರನ್ನು ಮೋಸ ಮಾಡಲಾಗುತ್ತಿದೆ. ಮುಂದೆ ರಸ್ತೆ ಸರಿಯಾದಲ್ಲಿ ಸ್ಥಳೀಯರನ್ನು ಬಿಡದೆ ಎಲ್ಲರಿಂದಲೂ ಹಣ ಪಡೆಯುತ್ತಾರೆ. ಇದೊಂದು ಸಾಂಕೇತಿಕವಾದ ಪ್ರತಿಭಟನೆ ಮುಂದೆಯೂ ಪರಿಹಾರ ಕಾಣದೇ ಇದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳನ್ನು ಸೇರಿಸಿಕೊಂಡು ಅನಿರ್ದಿಷ್ಟ ಮುಷ್ಕರದ ಜೊತೆಗೆ ಟೋಲ್ ನಿರಾಕರಣೆ ಚಳುವಳಿಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾದೀತು . ಡಿವೈಎಫ್ ಐ ಸಾಂವಿಧಾನಿಕವಾಗಿ ಹೋರಾಡುತ್ತದೆ. ಆದರೆ ತಲಪಾಡಿ, ಮಂಜೇಶ್ವರದ ಜನತೆ ಎದ್ದರೆಂದರೆ ಟೋಲ್ ಅನ್ನು ಮುಚ್ಚಿಯೇ ಕಂಪೆನಿಯವರು ತೆರಳಬೇಕಾಗಬಹುದು ಎಂದು ಎಚ್ಚರಿಸಿದರು.
ತಲಪಾಡಿ ಚಲೋ ಕಾರ್ಯಕ್ರಮಕ್ಕೆ ಸಿಪಿಎಂ ಪಕ್ಷದ ಉಳ್ಳಾಲ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜೆಡಿಎಸ್ ಮುಖಂಡರಾದ ನಜೀರ್ ಉಳ್ಳಾಲ್, ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ ಡಿವೈಎಫ್ಐ ಬಾವುಟವನ್ನು ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್ ಗೆ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಪಾದಯಾತ್ರೆ ತಲಪಾಡಿ ಸಾಗಿತು. ಕೋಟೆಕಾರ್ ಮತ್ತು ಕುಂಪಲ ಪ್ರದೇಶದ ನಾಗರಿಕರು ಉಪಹಾರದ ವ್ಯವಸ್ಥೆ ಮಾಡಿದರು. ಕೆ.ಸಿ ರೋಡ್ ಪ್ರದೇಶದ ಜನರು ಪಟಾಕಿ ಸಿಡಿಸಿ ಸ್ಬಾಗತಿಸಿದರು. ನಂತರ ತಲಪಾಡಿ ಟೋಲ್ ಗೇಟ್ ನಲ್ಲಿ ಸಮಾರೋಪ ನಡೆಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್, ಬಜಾಲ್ ಡಿವೈಎಫ್ ಐ ಉಳ್ಳಾಲವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಿ ಡಬ್ಲ್ಯುಎಫ್ಐ ಉಳ್ಳಾಲ ವಲಯ ನಾಯಕರಾದ ಜನಾರ್ದನ್ ಕುತ್ತಾರ್, ಜೈ ವೀರಾಂಜನೆಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ದಿವ್ಯಾನ್ ತೇವುಲ, ಮುನ್ನೂರು ಯುವಕ ಮಂಡಲ ಅಧ್ಯಕ್ಷರಾದ ಶಶೀಂದ್ರ ಕುಕ್ಯಾನ್, ಹನುಮಾನ್ ಕ್ರೀಡಾಮಂಡಳಿಯ ಅಧ್ಯಕ್ಷರಾದ ಕರುಣಾಕರ್ ಕಂಪ, ದ.ಕ ಜಿಲ್ಲಾ ಓನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷರಾದ ಜಗರಾಜ್ ರೈ, ಡಿವೈಎಫ್ಐ ಮಾಜಿ ಮಖಂಡರಾದ ಮಹಾಬಲ ದೆಪ್ಪಲಿಮಾರ್, ಅರುಣ್ ಕುಮಾರ್, ಡಿವೈಎಫ್ಐ ಉಳ್ಳಾಲ ಮುಖಂಡರಾದ ನಿತಿನ್ ಕುತ್ತಾರ್, ಸುನೀಲ್ ತೇವುಲ, ರಪೀಕ್ ಹರೇಕಳ, ಪಂಚಾಯತ್ ಸದಸ್ಯರಾದ ಅಶ್ರಪ್ ಹರೇಕಳ, ಹನೀಪ್ ಹರೇಕಳ ಉಪಸ್ಥಿತಿರಿದ್ದರು. ಅಶ್ರಪ್ ಟಿ.ಸಿ ರೋಡ್ ವಂದಿಸಿದರು.
ಅಗಲಿದ ಕಾರ್ಯಕರ್ತನಿಗೆ ಶ್ರದ್ಧಾಂಜಲಿ
ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಉಪಕಾರ್ಯದರ್ಶಿ, ಪಿಲಾರು ಘಟಕದ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಪಿಲಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿವಾರ ಬೆಳಿಗ್ಗೆ ನಿಧನ ಹೊಂದಿದ್ದರು. ವಿಚಾರ ತಿಳಿದರೂ ದಿನಾಂಕ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದುವರಿಸಿದ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಸಮಾರೋಪದ ಮುನ್ನ ಅಗಲಿದ ಕಾರ್ಯಕರ್ತನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸರ್ವಿಸ್ ರಸ್ತೆ ಕಾಮಗಾರಿ ಆರಂಭ
ಡಿವೈಎಫ್ಐ ನೇತೃತ್ವದಲ್ಲಿ ತಲಪಾಡಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭಟನೆ ನಡೆದರೆ ಮತ್ತೊಂದೆಡೆ ತೊಕ್ಕೊಟ್ಟು ಬಳಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭಗೊಂಡಿತು.