‘ಓದು ಬಾ’ ಬರಹ ಭಂಡಾರ ಉದ್ಘಾಟನೆ: ಗೋಪಾಡ್ಕರ್ ಸ್ವರೂಪ ಶಿಕ್ಷಣ ಪುಸ್ತಕ ಬಿಡುಗಡೆ ಸಮಾರಂಭ
ಮಂಗಳೂರು, ಆ.5: ದಿನೇಶ್ ಹೆಗ್ಡೆ ಉಳಿಪಾಡಿ ಅವರ ‘ಓದು ಬಾ’ ಬರಹ ಭಂಡಾರ ಗ್ರಂಥಾಲಯ ಹಾಗೂ ‘ಗೋಪಾಡ್ಕರ್ ಸ್ರೂಪ ಶಿಕ್ಷಣ’ ಪುಸ್ತಕವನ್ನು ನಗರದ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯ ಸುಧೀಂದ್ರ ಆಡಿಟೋರಿಯಂನಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಭಾಸ್ಕರ್ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಮೇಯರ್ ಭಾಸ್ಕರ್, ವಿದ್ಯೆ ಸಾಗರವಿದ್ದಂತೆ. ಓದುವುದರಿಂದ ಜ್ಞಾನ ವೃದ್ಧಿಸುತ್ತಾ ಹೋಗುತ್ತದೆ. ಗ್ರಂಥಾಲಯಗಳನ್ನು ಸ್ಥಾಪಿಸುವುದು ಸರಕಾರದ ಕೆಲಸವಾದರೂ ಸಂಸ್ಥೆಯೊಂದು ಅಂತಹ ಮಹತ್ಕಾರ್ಯಕ್ಕೆ ಮುಂದಾಗಿರುವುದು ವಿಶೇಷ. ಯುವ ಜನತೆಗೆ ಜ್ಞಾನ ಭಂಡಾರ ವೃದ್ಧಿಸಲು ಗ್ರಂಥಾಲಯ ಅತ್ಯಗತ್ಯ. ಸಾರ್ವಜನಿಕರು, ವಿದ್ಯಾರ್ಥಿಗಳು ಪುಸ್ತಕಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ಸಾಹಿತಿ, ಕಲಾವಿದ ಗುರುರಾಜ ಮಾರ್ಪಳ್ಳಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಶಾಲೆಯಲ್ಲಿ ನೀಡುವ ಅಂಕಗಳ ಹಿಂದೆ ಬೀಳುತ್ತಿದ್ದೇವೆ. ಅಂಕಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಇಲ್ಲದಿದೆ ಬದುಕುವ ಹಕ್ಕು ಇಲ್ಲ ಎನ್ನುವ ಅಭಿಪ್ರಾಯದತ್ತ ತೆರಳುತ್ತಿದ್ದೇವೆ. ಇದು ವಿಷಾದಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಮಕ್ಕಳು ಪ್ರಶ್ನೆ ಕೇಳದಂತೆ ಮಾಡುತ್ತಿದ್ದೇವೆ. ಅವರ ಸೃಜನಶೀಲತೆಗೆ ಬೆಲೆ ಕೊಡುತ್ತಿಲ್ಲ. ಪೋಷಕರು ತಮ್ಮ ಆಲೋಚನೆಗಳನ್ನೇ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಗಿಣಿರಾಮನನ್ನು ತಯಾರಿಸಲು ನಾವು ಹೊರಟಿದ್ದೇವೆ. ಬಾಯಿಪಾಠದಿಂದ ಮಕ್ಕಳನ್ನು ಅಳೆಯುವುದು ನಿಲ್ಲುವವರೆಗೂ ಶಿಕ್ಷಣ ಉದ್ಧಾರ ಆಗುವುದಿಲ್ಲ ಎಂದು ತಿಳಿಸಿದರು.
ಜರ್ಮನಿಯಂತಹ ದೇಶಗಳಲ್ಲಿ ಉದ್ಯಮಗಳನ್ನು ನಿಲ್ಲಿಸಲಾಗುತ್ತಿದೆ. ಬದಲಾಗಿ ಪರಿಸರಕ್ಕೆ ಸಂಬಂಧಿಸಿದ ಯೋಗ್ಯ ಕೆಲಸಗಳನ್ನು ಮಾಡಲು ಮುಂದಾಗು ತ್ತಿದ್ದಾರೆ. ಆದರೆ ಭಾರತ ಇದರ ವಿರುದ್ಧದ ಗತಿಯಲ್ಲಿ ಧಾವಿಸುತ್ತಿದೆ. ಅಮೆರಿಕದಂತಹ ರಾಷ್ಟ್ರದೊಂದಿಗೆ ಅಣು ವಿಜ್ಞಾನ ತರಲು ಭಾರತ ತುದಿಗಾಲಲ್ಲಿ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮರಗಳನ್ನು ಕಡಿಯುವ, ಕಾಡುಗಳನ್ನು ಕಾಂಕ್ರಿಟ್ ಕಾಡುಗಳನ್ನು ಮಾಡುತ್ತಾ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಜಗತ್ತನ್ನೇ ನಾಶ ಮಾಡಲಾಗುತ್ತಿದೆ. ಪರಿಸರದ ಸಂರಕ್ಷಣೆಯ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು ತಿಳಿಸಿದರು.
ಸ್ವರೂಪ ಶಿಕ್ಷಣವನ್ನು ಕನ್ನಡಿಗರು ಒಪ್ಪಿಕೊಂಡು ಅಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ಇದು ಆಂಗ್ಲ ಭಾಷೆಗೆ ತರ್ಜುಮೆಯಾಗಿ ವಿಶ್ವದಾದ್ಯಂತ ಹರಡುತ್ತದೆ. ಸ್ವರೂಪ ಶಿಕ್ಷಣ ಆಂಗ್ಲ ಭಾಷೆಯ ಕಣ್ಣಿಗೆ ಬಿದ್ದರೆ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತದೆ. ಇದರ ಸದ್ಬಳಕೆಯಿಂದ ದೊಡ್ಡ ಬದಲಾವಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸ್ವರೂಪ ಶಿಕ್ಷಣದ ಮಧ್ಯೆ ಗೋಪಾಡ್ಕರ್ ಅಲ್ಲಲ್ಲಿ ಕ್ರಾಂತಿಯ ಬೀಜಗಳನ್ನು ಬಿತ್ತುತ್ತಾ ಹೋಗುತ್ತಿದ್ದಾರೆ. ಮೈಕಲ್ ಜಾಕ್ಸನ್, ಚಾರ್ಲಿನ್ ಚಾಂಪ್ಲಿನ್ ಜನರಿಂದಲೇ ಹೆಸರುವಾಸಿಗಳಾದರು. ಹಾಗೆಯೇ ಸ್ವರೂಪ ಶಿಕ್ಷಣವನ್ನು ಜನರಿಂದಲೇ ಉನ್ನತ ಮಟ್ಟಕ್ಕೆ ತಲುಪಬೇಕು. ವಿಶ್ವದಾದ್ಯಂತ ಹೆಸರು ಗಳಿಸಬೇಕು ಎಂದು ಹಾರೈಸಿದರು.
ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯ ಚಿದಂಬರ ಬೈಕಂಪಾಡಿ, ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಸುಮಾಡ್ಕರ್, ಪಾರಂಪರಿಕ ವೈದ್ಯ- ತ್ರಿವೇಣಿ ವೈದ್ಯಶಾಲೆಯ ಡಾ.ಅಲ್ಡೋ ಎಂ.ಜಿ., ಚೇತನ್, ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.