ಸಿಪಿಎಂ ಕಾರ್ಯಕರ್ತ ಸಿದ್ದೀಕ್ ಕೊಲೆ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ
ಕಾಸರಗೋಡು ಸಂಸದ ಪಿ.ಕರುಣಾಕರನ್, ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್, ಮಾಜಿ ಸಚಿವ ಎಂ.ಜಯರಾಜನ್ ಅವರು ರವಿವಾರ ರಾತ್ರಿ ಕೊಲೆಯಾದ ಅಬೂಬಕರ್ ಸಿದ್ದೀಕ್ ಅವರ ಮೃತದೇಹದ ಅಂತಿಮ ದರ್ಶನ ಪಡೆದರು.
ಕಾಸರಗೋಡು, ಆ.6: ಸಿಪಿಎಂ ಕಾರ್ಯಕರ್ತ ಉಪ್ಪಳದ ಸೋಂಕಾಲ್ ನ ಅಬೂಬಕರ್ ಸಿದ್ದೀಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರಾದ ಸೋಂಕಾಲ್ ಪ್ರತಾಪ್ ನಗರದ ಅಶ್ವಥ್ ಮತ್ತು ಕಾರ್ತಿಕ್ ಪೊಲೀಸ್ ವಶದಲ್ಲಿರುವ ಆರೋಪಿಗಳಾಗಿದ್ದಾರೆ. ಇವರನ್ನು ಇಂದು ಮಧ್ಯಾಹ್ನ ಸೋಂಕಾಲ್ ಸಮೀಪದಿಂದಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಕೃತ್ಯ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿನ ಪೊದೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಿದ್ದೀಕ್ ರನ್ನು ನಾಲ್ವರ ತಂಡವು ತಡೆದು ಕೊಲೆ ಮಾಡಿತ್ತು. ಕೃತ್ಯಕ್ಕೆ ಬಳಸಿದ ಚಾಕು ಸಮೀಪದ ಪೊದೆಯೊಂದರಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೈಕ್ ಕೃತ್ಯ ನಡೆದ ಸ್ಥಳದಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು.
ಈ ನಡುವೆ ಸಿದ್ದೀಕ್ ರ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಉಪ್ಪಳಕ್ಕೆ ತರಲಾಗುತ್ತಿದ್ದು, ಕಾಲಿಕಡವು, ಕಾಞ೦ಗಾಡ್, ಕಾಸರಗೋಡು, ಕುಂಬಳೆ, ಉಪ್ಪಳ ಮೊದಲಾದೆಡೆಗಳಲ್ಲಿ ಅಂತಿಮ ದರ್ಶನಕ್ಕಿಡಲಾಗುವುದು. ಸಂಜೆ ಸೋಂಕಾಲ್ ನ ಮನೆಗೆ ತಂದು ಬಳಿಕ ಆರು ಗಂಟೆ ಸುಮಾರಿಗೆ ಸೋಂಕಾಲ್ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.
ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ವರದಿ ಹಿನ್ನಲೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ