ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರಿಂದ ಧರಣಿ
ಮಂಗಳೂರು, ಆ.6: ಸೇವಾ ಭದ್ರತೆ, ಭಡ್ತಿ, ಸೇವಾ ನಿಯಮಾವಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನೌಕರರು ನಗರದ ಕೊಟ್ಟಾರ ಬಳಿಯ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಿದರು.
ಈ ಸಂದರ್ಭ ಮಾತನಾಡಿದ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು) ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ನೌಕರರ ಮಾದರಿಯಲ್ಲಿ ಗ್ರಾಮ ಪಂಚಾಯತ್ ನೌಕರರಿಗೂ ಸರಕಾರಿ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಎಸೆಸೆಲ್ಸಿ ಪಾಸ್ ಆದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್ಗಳಿಗೆ ಈ ಹಿಂದೆ ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ ಭಡ್ತಿ ಸಿಗುತ್ತಿತ್ತು. ಪ್ರಸ್ತುತ ವಿದ್ಯಾರ್ಹತೆಯನ್ನು ಪಿಯುಸಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಅನೇಕ ಮಂದಿ ಭಡ್ತಿಯಿಂದ ವಂಚಿತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನಂತೆಯೇ ಎಸ್ಎಸ್ಎಲ್ಸಿ ಆದವರಿಗೆ ಭಡ್ತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಪಂ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ, ಗ್ರಾಚ್ಯುವಿಟಿ ಸಿಗಬೇಕು, ನಗರಾಭಿವೃದ್ಧಿ ಇಲಾಖೆಯಂತೆ ಗ್ರಾಪಂ ನೌಕರರಿಗೂ ಸೇವಾ ನಿಯಮಾವಳಿ ರಚಿಸಬೇಕು, 2011ರ ಜನಗಣತಿ ಆಧಾರದಲ್ಲಿ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಬೇಕು, ಎಂಎಸ್ ಸ್ವಾಮಿ ವರದಿ ಶಿಾರಸಿನಂತೆ ಜನಸಂಖ್ಯೆ, ಅವಶ್ಯಕತೆಗೆ ಅನುಗುಣವಾಗಿ ವಿವಿಧ ಹುದ್ದೆ ಸೃಷ್ಟಿಸಬೇಕು, ಪಂಪ್ ಆಪರೇಟರ್, ವಾಟರ್ಮ್ಯಾನ್ಗಳಿಗೆ ಸೌಲಭ್ಯ ನೀಡಬೇಕು, ಸ್ವಚ್ಛತೆಯವರಿಗೆ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಆಗಿರುವ ತೊಂದರೆ ನಿವಾರಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಕೆ. ಯಾದವ ಶೆಟ್ಟಿ, ಅಧ್ಯಕ್ಷ ರಘು ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಉಪಸ್ಥಿತರಿದ್ದರು.
ಬಳಿಕ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.