ಮಂಗಳೂರು: ಆ.7ರಂದು ‘ಬಲೆ ತೆಲಿಪಾಲೆ’ ಸೀಸನ್ 6
ಮಂಗಳೂರು, ಆ.6: ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ನಮ್ಮ ಟಿವಿ ಜಂಟಿ ಸಹಭಾಗಿತ್ವದ 6ನೇ ಆವೃತ್ತಿಯ ‘ಬಲೆ ತೆಲಿಪಾಲೆ’ ರಿಯಾಲಿಟಿ ಶೋ ಮೊದಲ ಸುತ್ತಿನ ಸ್ಪರ್ಧೆಗಳು ಆ.7ರಂದು ಪೂರ್ವಾಹ್ನ 11ರಿಂದ ನಗರದ ಪುರಭವನದಲ್ಲಿ ನಡೆಯಲಿದೆ.
ಈ ಬಾರಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಹಿಂದಿನ ಸೀಸನ್ಗಳಲ್ಲಿ ಫೈನಲ್ ಪ್ರವೇಶಿಸಿದ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥನ ಸ್ಥಾನ ಪಡೆದ ತಂಡಕ್ಕೆ 2 ಲಕ್ಷ ರೂ. ನಗದು, ದ್ವಿತೀಯ 1 ಲಕ್ಷ ರೂ.ನಗದು ಮತ್ತು ತೃತೀಯ ಸ್ಥಾನ ಪಡೆದ ತಂಡ 50 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆಯಲಿದೆ.
ತೆರೆಮರೆಯ ಕಾಯಿಯಂತಿದ್ದ ಹಲವಾರು ಹಾಸ್ಯ ಕಲಾವಿದರು ಇಂದು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುವುದಕ್ಕೆ ಬಲೆತೆಲಿಪಾಲೆ ಅವಕಾಶ ಕಲ್ಪಿಸಿದೆ ಎಂದು ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಾರ್ಯಕ್ರಮ ಸಂಯೋಜಕ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ, ಬಲೆ ತೆಲಿಪಾಲೆ ಹಾಸ್ಯಸ್ಪರ್ಧೆ ಯೂಟ್ಯೂಬ್ನಲ್ಲಿ 4 ಕೋಟಿಗೂ ಅಧಿಕ ಹಿಟ್ಸ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. 5 ಆವೃತ್ತಿ ಯಶಸ್ಸಿಯಾಗಿ ಸಂಘಟಿಸಲಾಗಿದ್ದು, ಅದರ ಪ್ರೇರಣೆಯಿಂದ ಆರನೇ ಆವೃತ್ತಿ ಆರಂಭಿಸಲಾಗುತ್ತಿದೆ. ತೀರ್ಪುಗಾರರಾಗಿ ವಿಜಯನಾಥ ವಿಠಲ ಶೆಟ್ಟಿ ಹಾಗೂ ಡಾ. ಶಿವಶರಣ್ ಶೆಟ್ಟಿ ಹಾಗೂ ಚಿತ್ರತಾರೆಯರು ಸಹಕರಿಸಲಿದ್ದಾರೆ ಎಂದರು.
ನಮ್ಮ ಟಿವಿ ಸ್ಟುಡಿಯೋ ಇನ್ಚಾರ್ಜ್ ಪ್ರವೀಣ್ ಕೆ. ಉಪಸ್ಥಿತರಿದ್ದರು.