ವಕೀಲರ ರಕ್ಷಣೆಗೆ ಕಾಯ್ದೆ ಜಾರಿಯಾಗಲಿ: ದಿನಕರ ಶೆಟ್ಟಿ ಆಗ್ರಹ
ಮಂಗಳೂರು, ಜು.6: ವಕೀಲರ ರಕ್ಷಣೆಗೆ ರಕ್ಷಣಾ ಕಾಯ್ದೆಯನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕು ಎಂದು ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಆಗ್ರಹಿಸಿದ್ದಾರೆ.
ಉತ್ತರ ಕನ್ನಡದ ದಾಂಡೇಲಿಯ ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಅಜಿತ್ ನಾಯ್ಕಾರನ್ನು ಇತ್ತೀಚೆಗೆ ಅವರ ಕಚೇರಿಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ತಲವಾರಿನಿಂದ ಕಡಿದು ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮಂಗಳೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನ್ಯಾಯವಾದಿ ಅಜಿತ್ ನಾಯ್ಕಾ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರ ಹತ್ಯೆ ನ್ಯಾಯವಾದಿಗಳಲ್ಲಿ ಕಳವಳವಳ ಮೂಡಿಸಿದೆ. ಈ ರೀತಿಯ ಘಟನೆಗಳು ರಾಜ್ಯದಲ್ಲಿ ಮರುಕಳಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸರಕಾರ ವಕೀಲರ ವೃತ್ತಿಗೆ ಭದ್ರತೆ ನೀಡುವ ಕಾನೂನು ಜಾರಿ ಮಾಡುವ ಅಗತ್ಯವಿದೆ ಎಂದು ದಿನಕರ ಶೆಟ್ಟಿ ಅಭಿಪ್ರಾಯಿಸಿದರು.
ದಾಂಡೇಲಿಯ ನ್ಯಾಯವಾದಿ ಅಜಿತ್ ನಾಯ್ಕಾ ಹತ್ಯೆ ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ತರ ಕುಟುಂಬಕ್ಕೆ ಕನಿಷ್ಠ 25ಲಕ್ಷ ರೂ. ಪರಿಹಾರ ನೀಡಬೇಕು ಎಂದು ದಿನಕರ ಶೆಟ್ಟಿ ಆಗ್ರಹಿಸಿದರು.
ಕೊಲೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಪುಷ್ಪಲತಾ ಯು.ಕೆ., ಕೋಶಾಧಿಕಾರಿ ಸುಜಿತ್ ಕುಮಾರ್, ಜೊತೆ ಕಾರ್ಯದರ್ಶಿ ರೂಪಾ ಕೆ., ಕಾರ್ಯಕಾರಿಣಿ ಸದಸ್ಯರಾದ ಉದನೀಶ್, ಡೇನಿಯಲ್, ಮಸ್ಕರೇನಸ್, ವಿನೋದ್ ಪಾಲ್, ಪ್ರೇಮ್ನಾಥ್ ಶೆಟ್ಟಿ, ಶ್ರೀಕುಮಾರ್, ಪ್ರಫುಲ್ಲಾ ಕುಮಾರಿ, ಜೀಟಾ ಪ್ರಿಯಾ ಮೋರಸ್, ಸುನೀಲ್, ಪ್ರಮೋದ್ ಕುಮಾರ್, ಕಿಶೋರ್ ಕುಮಾರ್, ಕಿಶೋರ್ ಡಿಸಿಲ್ವ, ನವೀನ್ ಚಿಲ್ಪರ್, ರೇಖಾ ಕೆ. ಮೊದಲಾದವರು ಉಪಸ್ಥಿತರಿದ್ದರು.