ಉ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಧಕೃಷ್ಣ ಭಟ್ ಆಯ್ಕೆ
ಭಟ್ಕಳ,ಆ.6: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2018 - 2021ರ ಅವಧಿಗೆ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣ ಭಟ್ ಅಧ್ಯಕ್ಷರಾಗಿ, ನರಸಿಂಹ (ಗುರು)ಅಡಿ ಶಿರಸಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಜಿ. ಸುಬ್ರಾಯ ಭಟ್ ಬಕ್ಕಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್. ವಿ. ಭಾಗ್ವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಬಸವರಾಜ ಪಾಟೀಲ ಮುಂಡಗೋಡ, ಅನಂತ ದೇಸಾಯಿ ಜೊಯಿಡಾ, ಖಜಾಂಚಿಯಾಗಿ ಸುಮಂಗಲಾ ಹೊನ್ನೆಕೊಪ್ಪ ಶಿರಸಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಮೂರ್ತಿ ಹೆಬ್ಬಾರ್ ಹೊನ್ನಾವರ, ಗಂಗಾಧರ ಕೊಳಗಿ ಸಿದ್ದಾಪುರ, ಫಯಾಝ್ ಮುಲ್ಲಾ ಭಟ್ಕಳ, ರಾಜೇಂದ್ರ ಹೆಗಡೆ ಶಿರಸಿ, ಭವಾನಿಶಂಕರ ನಾಯ್ಕ, ಯಶ್ವಂತ ನಾಯ್ಕ ಶಿರಸಿ, ಜೆ. ಆರ್. ಸಂತೋಷಕುಮಾರ ಶಿರಸಿ, ಎಂ.ಆರ್.ಮಾನ್ವಿ, ಭಟ್ಕಳ ಇವರುಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಧಾಕೃಷ್ಣ ಭಟ್ ಇವರು ಮೂರು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು 1993ರಿಂದ ನಿರಂತರವಾಗಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ರಾಜ್ಯ ಸಮಿತಿ ಸದಸ್ಯರಾಗಿ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಸೇವಾವಧಿಯಲ್ಲಿ ನಿರಂತರವಾಗಿ ಸಮಾಜದ ಕೆಳವರ್ಗದವರ ಪರವಾಗಿ, ನ್ಯಾಯಯುತ, ಸತ್ಯನಿಷ್ಟ ವರದಿಯ ಪರವಾಗಿ, ಅಭಿವೃದ್ಧಿ ಪರವಾಗಿ ಸದಾ ತಮ್ಮ ಚಿಂತನೆಗಳನ್ನು ಹರಿಬಿಡುತ್ತಾ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಸಮಾಜದ ವಿವಿಧ ಸಂಘಟನೆಗಳು ಹಲವಾರು ಸಂದರ್ಭಗಳಲ್ಲಿ ಸನ್ಮಾನಿಸಿದ್ದು 2016ರಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೂ ಕೂಡಾ ಭಾಜನರಾಗಿದ್ದು, 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿಯನ್ನು ಕೂಡಾ ಇವರಿಗೆ ನೀಡಿರುವುದನ್ನು ಸ್ಮರಿಸಬಹುದು.