ಮೂಡುಬಿದಿರೆ : ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಶಾಸಕ ಉಮಾನಾಥ ಕೋಟ್ಯಾನ್ ಸಭೆ
ಮೂಡುಬಿದಿರೆ,ಆ.6: ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆಗಳು ವಿಳಂಬ ಮಾಡದೆ ಆಧ್ಯತೆಯ ನೆಲೆಯಲ್ಲಿ ಕೆಲಸ ಮಾಡಬೇಕು. ಕಲ್ಲು ಕೋರೆ ಮಾಲಕರು ಕಾನೂನು ನಿಯಮಗಳನ್ನು ಪಾಲಿಸಬೇಕು. ಅನಗತ್ಯ ತೊಂದರೆಗಳಿಗೆ ಒಳಗಾಗಬಾರದು. 15 ದಿನಗಳೊಳಗೆ ಕೋರೆಗೆ ಸಂಭಂವಿಸಿದ ಅರ್ಜಿಯನ್ನು ಇತ್ಯರ್ಥಪಡಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಕೆಂಪುಕಲ್ಲು ಕೋರೆ ಉದ್ಯಮಿಗಳಿಗೆ ಎದುರಾಗಿರುವ ತೊಂದರೆಗಳ ಕುರಿತು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಲ್ಲು ಕೋರೆ ಮಾಲಿಕರೊಂದಿಗೆ ಸಮಲೋಚನೆ ನಡೆಸಿದರು.
ತಹಶೀಲ್ದಾರ್ ರಶ್ನಿ ಮಾತನಾಡಿ ಲೈಸನ್ಸ್ ನೀಡಲು ಕಾನೂನು ಬದ್ದವಾಗಿರುವ ಅರ್ಜಿಗಳನ್ನು 15 ದಿನದ ಒಳಗೆ ಇತ್ಯರ್ಥಗೊಳಿಸಲಾಗುವುದು. ಭೂ ಪರಿವರ್ತಿತ ಜಾಗದಲ್ಲಿ ಕೃಷಿಯ ಹೆಸರಲ್ಲಿ ಕಲ್ಲು ತೆಗೆಯುವಂತಿಲ್ಲ. ಸರ್ಕಾರಿ ಸ್ಥಳ ಅಥವಾ ಖಾಸಗಿ ಕುಮ್ಕಿ ಸ್ಥಳದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲು ಸಹಿತ ಯಾವುದೇ ಖನಿಜವನ್ನು ತೆಗೆಯುವಂತಿಲ್ಲ. ಕಲ್ಲು ಕೋರೆಯಲ್ಲಿ ಕಲ್ಲು ತೆಗೆದ ಬಳಿಕ ಕಡ್ಡಾಯವಾಗಿ ಅದನ್ನು ಮುಚ್ಚಬೇಕು. ಮುಚ್ಚದೆ ಯಾವುದೇ ರೀತಿಯ ಅವಘಡಗಳು ಸಂಭವಿಸಿದ್ದಲ್ಲಿ ಜಾಗದ ಮಾಲಿಕರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನಿರಂಜನ್ ಅವರು ಕೆಂಪು ಕಲ್ಲು ಕೋರೆಗೆ ಪರವಾನಗಿ ನೀಡುವ ನಿಟ್ಟಿನಲ್ಲಿ ಸರ್ಕಾರವು 2016 ರಲ್ಲಿ ಕಾನೂನು ತಿದ್ದುಪಡಿ ಮಾಡಿರುವುದರ ಕುರಿತು ಮಾಹಿತಿ ನೀಡಿದರು. ಹಾಗೂ ಕಲ್ಲುಕೋರೆ ಮಾಲಿಕರ ಸಮಸ್ಯೆಗಳಿಗೆ ಉತ್ತರಿಸಿದರು.
ಜಿ. ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಸುಮಿತ್ರಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಮೂರ್ತಿ ಉಪಸ್ಥಿತರಿದ್ದರು.