ಮಂಗಳೂರು : ಕ್ಯಾನ್ಸರ್ ರೋಗಕ್ಕೆ ಬಾಲಕ ನಿಧನ
ಮಂಗಳೂರು, ಆ.6: ಉಳ್ಳಾಲ ಉಳಿಯದ ಉಳ್ತಾಲ್ತಿ ಧರ್ಮ ಅರಸರ ಕ್ಷೇತದ ಅಂತ ಗುರಿಕಾರ ರಾಜೇಶ್ ಹಾಗೂ ಸುಕನ್ಯಾ ದಂಪತಿ ಏಕೈಕ ಪುತ್ರ ರಿಷಿತ್ ಕುಮಾರ್ (12 ವರ್ಷ) ರವಿವಾರ ಬೆಳಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನ ಜೆಪ್ಪು ಸಂತ ಜೆರೋಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ರಿಷಿತ್ ಕುಮಾರ್ ಕಳೆದ ಎರಡು ವರ್ಷಗಳಿಂದ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್)ನಿಂದ ಬಳಲುತ್ತಿದ್ದರು. ಇವರಿಗೆ ಆರಂಭದಲ್ಲಿ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಕೂಡಾ ಮಾಡಲಾಗಿತ್ತು.
ಆರ್ಥಿಕವಾಗಿ ಮಧ್ಯಮ ವರ್ಗದ ಕುಬಾಲಕನ ಚಿಕಿತ್ಸೆಗಾಗಿ ಆತ ಕಲಿಯುತ್ತಿದ್ದ ಶಾಲೆಯಲ್ಲಿ ಮಕ್ಕಳು ಸುಮಾರು 4 ಲಕ್ಷ ರೂ.ಗಳಷ್ಟು ಹಣವನ್ನು ಸಂಗ್ರಹಿಸಿ ನೀಡಿದ್ದರು. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಊರವರು ಕೂಡಾ ತಮ್ಮ ಪುತ್ರನನ್ನು ಉಳಿಸಿಕೊಳ್ಳಲು ಸಹಕರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿಷಿತ್ ರವಿವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಮೃತ ಬಾಲಕನ ಅಂತ್ಯಕ್ರಿಯೆಯು ರವಿವಾರ ಸಂಜೆ ನಡೆದಿದ್ದು, ಸಚಿವ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಸಂತೋಷ್ ಕುಮಾರ್ ಬೊಳಿಯಾರು, ಸ್ಥಳೀಯ ಪುರಸಭೆ ಸದಸ್ಯ ಸುಂದರ ಉಳಿಯ ಮೊದಲಾದವರು ಅಂತಿಮ ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.