ಬನ್ನೂರು ಸ್ಪೂರ್ತಿ ಸಂಸ್ಥೆಯಿಂದ ಆಟಿದ ಕೂಟ
ಆಟಿ ಆಚರಣೆಯ ನಂಬಿಕೆಗಳಿಗೆ ಮಹತ್ವವಿದೆ - ಸಂಶುದ್ದೀನ್ ಸಂಪ್ಯ
ಪುತ್ತೂರು,ಆ.6: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟ, ಕಾರ್ಪಣ್ಯಗಳ ತಿಂಗಳಾಗಿತ್ತು. ಆದರೆ ಆ ಸಂದರ್ಭದಲ್ಲಿ ಆಚರಣೆಯಲ್ಲಿದ್ದ ನಂಬಿಕೆಗಳು ಹಾಗೂ ಆಹಾರ ಪದ್ದತಿಗಳಿಗೆ ವಿಶೇಷವಾದ ಮಹತ್ವವಿದೆ ಎಂದು ಪತ್ರಕರ್ತ ಸಂಶುದ್ಧೀನ್ ಸಂಪ್ಯ ಹೇಳಿದರು.
ಅವರು ಸ್ಪೂರ್ತಿ ಯುವಕ ಯುವತಿ ಮಂಡಲ, ಮಹಿಳಾ ಮಂಡಲ, ಬಾಲಸಭಾ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬನ್ನೂರು ಎ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬನ್ನೂರು ಶ್ರಿ ಶನೀಶ್ವರ ದೇವರ ಸನ್ನಿಧಿಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುವರ ಆಟಿ ತಿಂಗಳು ಹಿಂದೆ ಬಾರಿ ಮಳೆ ಮತ್ತು ರೋಗ ರುಜಿನಗಳು ಹರಡುವ ಕಾಲವಾಗಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿ ಆಹಾರಗಳಿಲ್ಲದೆ ಜನರು ಪೃಕೃತಿಯಲ್ಲಿ ಸಿಗುವ ಎಲೆ, ಸೊಪ್ಪು, ಗಡ್ಡೆಗಳನ್ನು ಬಳಸುತ್ತಿದ್ದರು. ಅವೆಲ್ಲವೂ ಜನರ ಆರೋಗ್ಯ ವೃದ್ಧಿಗೆ ಕಾರಣವಾಗಿತ್ತು. ಅಲ್ಲದೆ ಆಟಿ ಕಳೆಂಜ ಜನರ ರೋಗವನ್ನು ತಡೆಯುತ್ತಾ ಆ ಊರಿನ ರೋಗ ರುಜಿನಗಳೆಂಬ ಮಾರಿಯನ್ನು ಊರಿನಿಂದ ಆಚೆ ಹಾಕುತ್ತಾನೆ ಎಂಬ ನಂಬಿಕೆ ಜನರಲ್ಲಿತ್ತು. ಜನರ ರೋಗ ಮತ್ತು ಮರಣದ ಭಯ ಮತ್ತು ಖಿನ್ನತೆಯನ್ನು ತಡೆಯುವ ಕೆಲಸವನ್ನು ಆಟಿ ಕಳೆಂಜ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಆಟಿ ತಿಂಗಳಲ್ಲಿ ಹೆಣ್ಣುಮಕ್ಕಳನ್ನು ತಾಯಿ ಮನೆಗೆ ಕರೆಸಿಕೊಳ್ಳುವ ಸಂಪ್ರದಾಯದಲ್ಲಿ ಸ್ತ್ರೀ ಗೌರವದ ಸಂಕೇತದ ಜೊತೆಗೆ ಹೆಣ್ಣು ಮಕ್ಕಳು ಹಸಿವಿನಿಂದ ಬಳಲಬಾರದು ಎಂಬ ಕಲ್ಪನೆಯಿತ್ತು. ಆಟಿ ಅಮವಾಸ್ಯೆಯಲ್ಲಿ ಬಳಸುವ ಹಾಲೆ ಕೆತ್ತೆ ಕಷಾಯದ ಕುಡಿಯುವುದರಿಂದ ರೋಗಗಳು ಮಾಯವಾಗುತ್ತದೆ ಎಂಬ ನಂಬಿಕೆಗಳಿತ್ತು ಎಂದ ಅವರು ಮರೆಯಾಗುತ್ತಿರುವ ಆಟಿ ಆಚರಣೆಯ ಪದ್ದತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಮುಂದೆ ಬರುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯರಾದ ಸ್ತ್ರಿ ಶಕ್ತಿ ಸಂಘದ ಸದಸ್ಯೆ ಗುಲಾಬಿ ಮಾತನಾಡಿ ಹಿರಿಯರ ಕಾಲದಲ್ಲಿ ಆಟಿ ಎಂಬುದು ತುಂಬಾ ಸಂಕಷ್ಟದ ದಿನಗಳಾಗಿತ್ತು. ಜನರು ತಮ್ಮ ಹಸಿವನ್ನು ಕಳೆಯಲು ಆ ಸಂದರ್ಭದಲ್ಲಿ ಗೆಡ್ಡೆ, ಗೆಣಸುಗಳನ್ನು ತಿನ್ನುತ್ತಿದ್ದರು. ಆ ದಿನಗಳನ್ನು ನೆನಪಿಸುವುದು ಉತ್ತಮ ಯೋಚನೆಯಾಗಿದೆ ಎಂದರು.
ಸ್ಪೂರ್ತಿ ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ನಾಯ್ಕ ಮತ್ತು ಪತ್ರಕರ್ತ ಸಂಶುದ್ಧೀನ್ ಸಂಪ್ಯ ಅವರು ತೆಂಗಿನ ಕಾಯಿ ಕುಟ್ಟುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ಪೂರ್ತಿ ಬಾಲಸಭಾ ಸದಸ್ಯರಾದ ಭಕ್ತಿ ಡಿ.ಎಸ್, ಲಾವಣ್ಯ, ದಿವ್ಯ ಪಿ.ಎಸ್ ಪ್ರಾರ್ಥಿಸಿದರು. ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ನವೀನ್ ರೈ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆದರ್ಶ್ ಸಾಲಿಯಾನ್ ವಂದಿಸಿದರು. ಸಂಸ್ಥೆಯ ಸಂಚಾಲಕ ದಿನೇಶ್ ಸಾಲಿಯಾನ್ ನಿರೂಪಿಸಿದರು.
ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಹೇಮಲತಾ ಹೆಗ್ಡೆ, ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೋಹಿಣಿ ಪಿ, ಸಹಾಯಕಿ ಜಯಂತಿ, ಸಂಸ್ಥೆಯ ಸದಸ್ಯರು ಸಹಕರಿಸಿದರು.