ಪಿಓಪಿ ವಿಗ್ರಹ: ಜಲಮೂಲಗಳಲ್ಲಿ ವಿಸರ್ಜನೆಗೆ ನಿರ್ಬಂಧ
ಉಡುಪಿ, ಆ.6: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಯು ರಾಜ್ಯದಲ್ಲಿ ಜಲ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯು ಫ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ)ಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿರುದೆ. ರಾಜ್ಯದ ಉಚ್ಛ ನ್ಯಾಯಾಲಯವು ಮಂಡಳಿಯ ಅಧಿಸೂಚನೆಯನ್ನು ಕ್ರಮಬದ್ಧಗೊಳಿಸಿದೆ.
ಮಂಡಳಿಯು ಜಲ ಮಾಲಿನ್ಯ(ತಡೆ ಮತ್ತು ನಿಯಂತ್ರಣ) ಕಾಯ್ದೆಯಂತೆ ಜಲಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ತಡೆಗಟ್ಟುವ ಶಾಸನಬದ್ದ ಜವಾಬ್ದಾರಿಯನ್ನು ಹೊಂದಿದೆ. ಇತ್ತೀಚೆಗೆ ಸಾರ್ವಜನಿಕರು ಆಚರಿಸುತ್ತಿರುವ ಹಬ್ಬ ಮತ್ತು ಇತರೆ ಸಮಾರಂಭದಲ್ಲಿ ಪಿಓಪಿ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ವ್ಯಾಪಕವಾಗಿ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮಂಡಳಿಯು ಅಂತಹ ಜಲಮೂಲಗಳ ನೀರಿನ ಮಾದರಿ ಗಳನ್ನು ಸಂಗ್ರಹಿಸಿ ಪರಿಕ್ಷಿಸಿದ್ದು, ಈ ವರದಿಗಳ ಪ್ರಕಾರ ಅಂತಹ ಜಲಮೂಲಗಳು ವಿಗ್ರಹಗಳ ವಿಸರ್ಜನೆಯಿಂದ ಮಾಲಿನ್ಯವಾಗುತ್ತಿರುವುದು ದೃಢಪಟ್ಟಿದೆ.
ಈ ಜಲಮಾಲಿನ್ಯವು ವಿಗ್ರಹಗಳಲ್ಲಿ ಉಪಯೋಗಿಸಿದ ಪಿಓಪಿಯಿಂದ ಮತ್ತು ಬಳಸುವ ರಾಸಾಯನಿಕ ಬಣ್ಣಗಳಿಂದ ಆಗುತ್ತಿದ್ದು, ಇದರಿಂದ ಜಲಮೂಲಗಳ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಇತರೆ ಜಲಚರಗಳ ಜೀವಕ್ಕೆ ಅಪಾಯ ಉಂಟಾಗುವುದು ಹಾಗೂ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆಯಾಗುತ್ತದೆ.
ಆದುದರಿಂದ ಇಂತಹ ಕ್ರಿಯೆಗಳನ್ನು ತಡೆಯಲು ಮಂಡಳಿಯ ಜಲ ಮಾಲಿನ್ಯ(ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಅ)ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೇ ಯಾವುದೇ ಜಲ ಮೂಲಗಳಲ್ಲಿ ಪಿಓಪಿ ಯಿಂದ/ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಜಲಗಳಲ್ಲಿ, ನದಿ, ಕಾಲುವೆ /ಬಾವಿಗಳಲ್ಲಿ ವಿಸರ್ಜಿಸುವುದನ್ನು ಈ ಮೂಲಕ ನಿಷೇಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ದಂಡ ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶ ಇದೆ. ಆದುದರಿಂದ ಜಲಮೂಲಗಳಲ್ಲಿ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣೇಶ ಹಬ್ಬದಲ್ಲಿ ಆವೆಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಮಾತ್ರ ಬಳಸಬೇಕು ಎಂದು ಮಂಡಳಿಯ ಡಾ.ಎಚ್.ಲಕ್ಷ್ಮೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.