ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ಮುಕ್ತಾಯ
ಮಂಗಳೂರು, ಆ.6: ದ.ಕ. ನಿರ್ಮಿತಿ ಕೇಂದ್ರ ಸುರತ್ಕಲ್ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ಕೇಂದ್ರ ಸಹಯೋಗದೊಂದಿಗೆ ನಿರ್ಮಿತಿ ಕೇಂದ್ರದಲ್ಲಿ ನಡೆಯುತ್ತಿರುವ ಜಿಲ್ಲೆಯ 4 ಇಂಜಿನಿಯರಿಂಗ್ ಕಾಲೇಜಿನ 35 ಮಂದಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಇಂಟರ್ನ್ಶಿಪ್ ತರಬೇತಿಯ ಸಮಾರೋಪ ಕಾರ್ಯಕ್ರಮವು ಇತ್ತೀಚೆಗೆ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ನಡೆಯಿತು.
ಸುಳ್ಯ ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸಿವಿಲ್ ವಿಭಾಗದ ಮುಖ್ಯಸ್ಥ ಇಂಜಿನಿಯರ್ ಡಾ. ಚಂದ್ರಶೇಖರ್ ಪಿ. ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಎಸಿಸಿಇ(ಐ)ನ ಮಂಗಳೂರು ಕೇಂದ್ರದ ಅಧ್ಯಕ್ಷ ಅನಿಲ್ ಡಿಸೋಜ, ರಾಷ್ಟ್ರೀಯ ಉಪಾಧ್ಯಕ್ಷ ವಿಜಯ ವಿಷ್ಣು ಮಯ್ಯ ಮತ್ತು ಕಾರ್ಯದರ್ಶಿ ಸತ್ಯನಾರಾಯಣ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲೆಯ ಶ್ರೀನಿವಾಸ ಸ್ಕೂಲ್ ಆಫ್ ಇಂಜಿನಿಯರಿಂಗ್, ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಮತ್ತು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಕಾಲೇಜಿನ ತಲಾ ಒಬ್ಬ ವಿದ್ಯಾರ್ಥಿಯು ತರಬೇತಿ ಅವಧಿಯಲ್ಲಿ ಪಡೆದ ಅನುಭವ ತಿಳಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ವಿಜಯ ವಿಷ್ಣು ಮಯ್ಯ ಇಂಟರ್ನ್ಶಿಪ್ ತರಬೇತಿ ಕಾರ್ಯಕ್ರಮದ ಅಗತ್ಯದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳಿಗೆ ತರಬೇತಿ ಸಮಯದಲ್ಲಿ ನೀಡಲಾದ ವಿವಿಧ ತರಬೇತಿಯ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ದ.ಕ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು.