ಮಣ್ಣಗುಡ್ಡೆಯಲ್ಲಿ ಸರಕಳವು: ದೂರು
ಮಂಗಳೂರು, ಆ. 6: ನಗರದ ಮಣ್ಣಗುಡ್ಡೆಯಲ್ಲಿ ಸೋಮವಾರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಎಗರಿಸಿದ ಘಟನೆ ನಡೆದಿದೆ.
ಮಣ್ಣಗುಡ್ಡೆಯ ರಾಧಿಕಾ ಪೈ (52) ಬೆಳಗ್ಗೆ 10:20ರಿಂದ 10:30ರ ನಡುವೆ ಮಣ್ಣಗುಡ್ಡೆಯ ಕಾಂತರಾಜು ಗಟ್ಟಿ ಲೇನ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಲ್ಸರ್ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಕಸಿದುಕೊಂಡು ಹೋಗಿದ್ದಾರೆ.
ಸುಮಾರು 48 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದು, ಇದರ ಬೆಲೆ 1,60,000 ರೂ. ಎಂದು ಅಂದಾಜಿಸಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Next Story