ನೆಲ್ಲಿಕಟ್ಟೆ : ಗರಡಿಗೆ ನುಗ್ಗಿ ಕಳವು
ಕಾರ್ಕಳ, ಆ.6: ನೆಲ್ಲಿಕಟ್ಟೆಯಲ್ಲಿರುವ ಹಾಡಿ ಶ್ರೀಬ್ರಹ್ಮ ಬೈದರ್ಕಳ ಮಾಯಂದಾಲ ದೇವಿ ಗರಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಗರಡಿಯ ಪ್ರಧಾನ ಅರ್ಚಕ ಕೃಷ್ಣಪ್ಪ ಪೂಜಾರಿ ಜು.16ರಂದು ಗರಡಿಯಲ್ಲಿ ಪೂಜೆ ಮಾಡಿ ಬೀಗ ಹಾಕಿ ಹೋಗಿದ್ದು, ಆ.6ರಂದು ಬೆಳಗ್ಗೆ ಗರಡಿಯ ಬಳಿ ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ.
ಈ ಮಧ್ಯಾವಧಿಯಲ್ಲಿ ಕಳ್ಳರು ಸುತ್ತು ಪೌಳಿಯ ಬಾಗಿಲಿನ ಬೀಗ ಮತ್ತು ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ಮಾಯಂದಾಲ ದೇವಿಯ ಮೂರ್ತಿಯ ಮತ್ತು ಮಗುವಿನ ಮೂರ್ತಿಯ ಮೇಲೆ ಇದ್ದ ಚಿನ್ನದ ನೆತ್ತಿ ಬತ್ತಲೆ, ಕಿವಿ ಬೆಂಡೋಲೆ, ವಜ್ರ ಖಚಿತ ಚಿನ್ನದ ಮೂಗುತಿ, ಚಿನ್ನದ ಕಣ್ಣು ದೃಷ್ಟಿ, ಕರಿಮಣಿ ಸರ, ಬೆಳ್ಳಿಯ ಗೆಜ್ಜೆಕತ್ತಿಗಳನ್ನು ಕಳವು ಮಾಡಿದ್ದು ಇವುಗಳ ಒಟ್ಟು ಮೌಲ್ಯ 4,08,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story