ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಸಿಬ್ಬಂದಿ ಸಂಘದಿಂದ ಮನವಿ
ಮಂಗಳೂರು,ಆ.6: ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಸಿಬ್ಬಂದಿ ಸಂಘವು ಸಂಸದ ನಳಿನ್ ಕುಮಾರ್ ಕಟೀಲ್ರನ್ನು ಶನಿವಾರ ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿತು.
ಕಳೆದ 25-30 ವರ್ಷಗಳಿಂದ ಪದೋನ್ನತಿ ಪಡೆಯದೆ ನಾಲ್ಕು ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಎಲ್ಲ ಕಾರ್ಯಕ್ರಮ ನಿರ್ವಾಹಕರಿಗೂ ವೇತನ ಬಡ್ತಿ, ಭಾರತೀಯ ಕಾರ್ಯಕ್ರಮ ಸೇವೆಗೆ ನಿಗದಿಗೊಳಿಸಿದ ಉನ್ನತ ಹುದ್ದೆಗಳಿಗೆ ತಾಂತ್ರಿಕ ಸೇವಾ ವಿಭಾಗದವರನ್ನು ನೇಮಿಸಬಾರದು. ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಎಲ್ಲ ಕಾರ್ಯಕ್ರಮ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗಳಿಗೆ ನೀಡಬೇಕು. ಪ್ರಸಾರ ಭಾರತಿಯು ಕಾರ್ಯಕ್ರಮ ಸಿದ್ಧಪಡಿಸಲು ಖರ್ಚು ಮಾಡುವ ಒಟ್ಟು ವೆಚ್ಚದಲ್ಲಿ ಶೇ.15ಷ್ಟು ಅನುದಾನ ನೀಡುತ್ತಿದ್ದು ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಿ ಗುಣಮಟ್ಟ ಕಾರ್ಯಕ್ರಮ ನಿರ್ಮಾಣ ಮಾಡಲು ಉತ್ತೇಜನ ನೀಡಬೇಕು. ಸಾರ್ವಜನಿಕ ಪ್ರಸಾರ ಸೇವೆಯ ಈ ಸಂಸ್ಥೆಯಲ್ಲಿ ಆಧಾರ ಸ್ತಂಭವಾಗಿರುವ ಕಾರ್ಯಕ್ರಮ ಸಿಬ್ಬಂದಿಯನ್ನು ಕಡೆಗಣಿಸದೆ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಂಗಳೂರು ಆಕಶವಾಣಿ ಕೇಂದ್ರದ ಕಾರ್ಯಕ್ರಮ ಸಿಬ್ಬಂದಿ ಸಂಘದ ಕಾರ್ಯದರ್ಶಿ ಟಿ.ಶ್ಯಾಮ್ಪ್ರಸಾದ್ ನೇತೃತ್ವದ ನಿಯೋಗದಲ್ಲಿ ಉಷಾಲತಾ ಸರಪಾಡಿ, ಸೂರ್ಯನಾರಾಯಣ ಭಟ್, ಡಾ. ಸದಾನಂದ ಪೆರ್ಲ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಕನ್ಸೆಪ್ಟಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.