‘ಪತ್ತಿಸ್ ಗ್ಯಾಂಗ್’ ಸಿನಿಮಾದ ಧ್ವನಿಸುರುಳಿ ಅನಾವರಣ
ಮಂಗಳೂರು, ಆ.6: ತುಳುವಿನ ಹೊಸ ಚಲನಚಿತ್ರ ‘ಪತ್ತೀಸ್ ಗ್ಯಾಂಗ್’ ಹೊಸ ಅಲೆ ಸೃಷ್ಟಿಸುವುದು ಖಚಿತ ಎಂದು ತುಳು ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಅಭಿಪ್ರಾಯಪಟ್ಟರು.
ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆಯ 19ನೇ ಕಾರ್ಯಕ್ರಮದಲ್ಲಿ ‘ಪತ್ತಿಸ್ ಗ್ಯಾಂಗ್’ ಸಿನಿಮಾದ ಧ್ವನಿಸುರುಳಿಯನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಸಿನಿಮಾ ನೈಜ ಕಥೆಯ ಹಂದರ ಹೊಂದಿದೆ. ಧೂಮಪಾನ, ಕುಡಿತ ಹಾಗೂ ಐಟಂ ಸಾಂಗ್ ಇಲ್ಲದ ಸಂಪೂರ್ಣ ಕುಟುಂಬ ಪ್ರಧಾನ, ಹಾಸ್ಯಭರಿತ ಚಿತ್ರ ಇದಾಗಿದೆ. ಅರವಿಂದ ಬೋಳಾರ್, ಚಂದ್ರಹಾಸ್ ಉಳ್ಳಾಲ್, ಕಿಶೋರ್ ಶೇಣಿ, ಅಜಯರಾಜ್ ಮುಂತಾದ ಪ್ರತಿಭಾವಂತರ ಕಲಾವಿದರ ದಂಡು ಇರುವ ಈ ಸಿನಿಮಾ ಹೊಸ ಅಲೆ ಸೃಷ್ಟಿಸಲಿದೆ ಎಂದರು.
ನಿರ್ಮಾಪಕ ಮನೋಜ್ಕುಮಾರ್ ಹಾಗೂ ನಿರ್ದೇಶಕ ಸೂರಜ್ ಬೋಳಾರ್, ನಟರಾದ ಚಂದ್ರಹಾಸ್ ಉಚ್ಚಿಲ್, ವಿಸ್ಮಯ ನಾಯಕ್, ನಾಯಕಿ ನಟಿ ನವ್ಯತಾ ರೈ, ಶಿಕ್ಷಣ ತಜ್ಞ ದೇವರಾಜ್ ಕಂಕನಾಡಿ, ಪತ್ರಕರ್ತ ವಿಜಯ ಕೋಟ್ಯಾನ್ ಮೋನಿ ವಿಟ್ಲ, ಪ್ರಕಾಶ್ ಬಿ.ಸಿ.ರೋಡ್, ಚಂದ್ರಶೇಖರ್ ಪಾಣಾಜೆ, ರಾಧಾ ಪ್ರಭಾಕರನ್, ಎ. ಪ್ರಭಾಕರ್, ಮೋಹನ್ದಾಸ್ ಮರೋಳಿ, ವಿಠಲ್ ಮತ್ತಿತರರು ಉಪಸ್ಥಿತರಿದ್ದರು.
ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ನಿರೂಪಿಸಿದರು.