ಪುರಂದರ ಭಟ್ ಜೀವನ ಕೃತಿ ಲೋಕಾರ್ಪಣೆ
ಹೊಸ ಹೊಳಹುಗಳನ್ನು ಸೃಷ್ಟಿಸಲು ಅವರ ಜೀವನದ ಕುರಿತ ಪುಸ್ತಕ ಕಾರಣೀಭೂತವಾಗಿದೆ -ಡಾ. ದೇರ್ಲ
ಪುತ್ತೂರು; ದೂರದೃಷ್ಟಿ, ಜೀವವಾದ, ಎಡಬಲದ ಚಿಂತನೆ ಬಿ.ಪುರಂದರ ಭಟ್ರ ವ್ಯಕ್ತಿತ್ವದಲ್ಲಿ ಚಿರಸ್ಥಾಯಿಯಾಗಿದೆ. ಹೊಸ ಹೊಳಹುಗಳನ್ನು ಸೃಷ್ಟಿಸಲು ಅವರ ಜೀವನದ ಕುರಿತ ಪುಸ್ತಕ ಕಾರಣೀಭೂತವಾಗಿದೆ ಎಂದು ಪುತ್ತೂರು ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.
ಅವರು ರವಿವಾರ ಇಲ್ಲಿಯ ಟೌನ್ಬ್ಯಾಂಕ್ ಸಭಾಂಗಣದಲ್ಲಿ ಅದಮ್ಯ ಕ್ರಿಯಾಶೀಲತೆಯ ಪ್ರತೀಕ ಬಿ.ಪುರಂದರ ಭಟ್ ಅವರ ಕುರಿತಾದ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜೀವಾವಾದದ ಚಿಂತನೆ ಪುರಂದರ ಭಟ್ರ ಒಳಗಡೆ ಇರುವುದರಿಂದಲೇ ಅವರು ನೇರ, ನಿಷ್ಠುರವಾಗಿ ಮಾತನಾಡುವುದನ್ನು ತನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದಾರೆ. ಭಟ್ರ ಬಡತನ, ಅವರ ಹೋರಾಟದ ಆರಂಭದ ಜತೆಗೆ ಎಲ್ಲರನ್ನೂ ಪ್ರೀತಿಸುವ ಕುರಿತು ಕೃತಿಯಲ್ಲಿ ಅಡಕವಾಗಿರುವುದು ಅವರೊಬ್ಬ ಹುಟ್ಟು ಹೋರಾಟಗಾರ ಎಂಬುದನ್ನು ಎತ್ತಿತೋರಿಸುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾವಿದ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ಭಟ್ಟರು ಅಸಾಧ್ಯ ಮನುಷ್ಯ. ಎಲ್ಲವನ್ನೂ ಗ್ರಹಿಸುವ, ಅಳವಡಿಸುವ ಶಕ್ತಿ ಅವರಿಗಿದೆ. ತನ್ನ ಜೀವನದುದ್ದಕ್ಕೂ ಸತತ ಪ್ರತಿಭಟನೆಯವರಾಗಿ ಅವರು ಕಾಣಿಸಿಕೊಳ್ಳುತ್ತಾರೆ ಎಂಬುದು ಅವರ ಕುರಿತ ಈ ಕೃತಿಯಲ್ಲಿ ಉಲ್ಲೇಖವಾಗಿದೆ ಎಂದರು.
ಕೃತಿಯ ಲೇಖಕ, ಅಂಬಿಕಾ ಪದವಿಪೂರ್ವ ಕಾಲೇಜಿನ ಸಂಸ್ಕøತ ಉಪನ್ಯಾಸಕ ಎಸ್.ಪರೀಕ್ಷಿತ ತೋಳ್ಪಾಡಿ ಮಾತನಾಡಿ, ಕಾರಂತರ ಬಗ್ಗೆ ಹೆಚ್ಚಿನ ಅಭಿಮಾನ, ದಯಾನಂದ ಸರಸ್ವತಿ ಅವರ ಅಭಿಮಾನಿ ಹಾಗೂ ಪೊಳಲಿ ದೇವಿಯ ಪರಮ ಭಕ್ತ ಇವು ಮೂರು ಹೊರನೋಟಕ್ಕೆ ಕಾಣುವ ವಿಭಿನ್ನ ಸಂಗತಿ ಪುರಂದರ ಭಟ್ರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ ಎಂದರು.
ಕೃತಿಯೊಳಗಿನ ವ್ಯಕ್ತಿ ಬಿ.ಪುರಂದರ ಭಟ್ ಮಾತನಾಡಿ, ತನ್ನ ಜೀವನದುದ್ದಕ್ಕೂ ಕಾರ್ಮಿಕರ ಪರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಕಾರ್ಮಿಕರ ಹೊರತಾಗಿ ದೇಶವನ್ನು, ಧರ್ಮವನ್ನು ಕಲ್ಪಿಸಲು ಸಾಧ್ಯವಿಲ್ಲ. ತಾನು ಜೀವನ ನಡೆಸುತ್ತಿರುವ ಅನುರಾಗ ವಠಾರಕ್ಕೆ ಜನಶಕ್ತಿಯನ್ನು ಒದಗಿಸಿಕೊಟ್ಟದ್ದು ಕಾರ್ಮಿಕ ಬಳಗ ಎಂದು ಹೇಳಿದರು.
ಎಚ್ಚರ ಬಳಗದ ಕೆ.ಜಯರಾಮ ಕುಲಾಲ್ ಸ್ವಾಗತಿಸಿದರು. ಎಚ್ಚರ ಬಳಗದ ತೇಜ ಕುಮಾರ್ ಎನ್. ವಂದಿಸಿದರು. ಅಂಬಿಕಾ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೆ.ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.