ಶಿರ್ವ: ಜನತೆಯನ್ನು ಭಯಭೀತಗೊಳಿಸಿದ್ದ ಚಿರತೆ ಸೆರೆ
ಉಡುಪಿ, ಆ.7: ಕಳೆದ ಹಲವು ದಿನಗಳಿಂದ ಪಾಂಬೂರು ಪರಿಸರದಲ್ಲಿ ಆಗಾಗ ಪ್ರತ್ಯಕ್ಷಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ.
ಪಡುಬೆಳ್ಳೆ ಗ್ರಾಮದ ಪಾಂಬೂರು ನಿವಾಸಿ ಜಾರ್ಜ್ ಫ್ಲೋರಿನ್ ಸಲ್ದಾನ ಎಂಬವರ ಮನೆ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಎಂಟು ವರ್ಷದ ಈ ಗಂಡು ಚಿರತೆ ಇಂದು ಬೆಳಗ್ಗೆ ನೋಡುವಷ್ಟರಲ್ಲಿ ಬೋನಿನಲ್ಲಿ ಪತ್ತೆಯಾಗಿತ್ತು.
ಕಳೆದ ಕೆಲವು ದಿನಗಳಿಂದ ಈ ಪರಿಸರದ ಹಲವೆಡೆ ಚಿರತೆ ಪ್ರತ್ಯಕ್ಷಗೊಂಡು ಪರಿಸರವಾಸಿಗಳ ಆತಂಕಕ್ಕೆ ಕಾರಣವಾಗಿತ್ತು. ಸ್ಥಳೀಯ ನಿವಾಸಿ ಭಾಸ್ಕರ ಎಂಬವರ ನಾಯಿಯನ್ನು ಮನೆಯವರೇ ಕಣ್ಣೆದುರೇ ಚಿರತೆ ಕೊಂಡೊಯ್ದಿತ್ತು. ಈ ಬಗ್ಗೆ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಇದನ್ನು ಸೆರೆ ಹಿಡಿಯಲು ಪಾಂಬೂರು ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಬೋನು ಇಟ್ಟಿದ್ದರು. ಅರಣ್ಯಾಧಿಕಾರಿಗಳ ಪ್ರಯತ್ನ ಯಶಸ್ವಿಯಾಗಿದ್ದು, ಇಂದು ಬೆಳಗ್ಗೆ ಚಿರತೆ ಬೋನಿಗೆ ಬೀಳುವುದರೊಂದಿಗೆ ಸ್ಥಳೀಯರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಶಾಲಾ ಮಕ್ಕಳ ವೀಕ್ಷಣೆಗೆ ಅವಕಾಶ: ಬೋನಿಗೆ ಬಿದ್ದಿರುವ ಚಿರತೆಯನ್ನು ಪಾಂಬೂರು ಪರಿಸರದ ನಾಲ್ಕು ಶಾಲೆಗಳ ವಿದ್ಯಾರ್ಥಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ದೂರದಿಂದ ಚಿರತೆಯನ್ನು ವೀಕ್ಷಿಸಿ ಸಂತಸಪಟ್ಟರು.