ಕಾಸರಗೋಡಿನಲ್ಲಿ ಬಂದ್ ಆಗಿ ಪರಿವರ್ತನೆಯಾದ ಸಾರಿಗೆ ಮುಷ್ಕರ
ಕಾಸರಗೋಡು, ಆ.7: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ನೀಡಿದ್ದ ಮುಷ್ಕರ ಕರೆಗೆ ಕಾಸರಗೋಡಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು, ಬಂದ್ ಆಗಿ ಪರಿವರ್ತನೆಗೊಂಡಿದೆ.
ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ಸಂಚಾರ ನಡೆಸುತ್ತಿವೆ. ಸರಕು ಸಾಗಾಟ ಲಾರಿ, ಆಟೋ ಟ್ಯಾಕ್ಸಿ ಗಳು ರಸ್ತೆಗಿಳಿದಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ರಜೆ ಕೂಡಾ ಸಾರಲಾಗಿದೆ.
ಸೋಮವಾರ ಉಪ್ಪಳ ಸೋಂಕಾಲಿನಲ್ಲಿ ಸಿಪಿಎಂ ಕಾರ್ಯಕರ್ತ ಅಬೂಬಕರ್ ಸಿದ್ದೀಕ್ ಅವರ ಹತ್ಯೆಯನ್ನು ಖಂಡಿಸಿ ಮಂಜೇಶ್ವರ ತಾಲೂಕಿನಲ್ಲಿ ಹರತಾಳ ನಡೆದಿತ್ತು. ಎರಡನೇ ದಿನವಾದ ಇಂದು ವಾಹನ ಮುಷ್ಕರ ಬಂದ್ ಆಗಿ ಪರಿವರ್ತನೆಗೊಂಡಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಆದರೆ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಬಿಜೆಪಿಯ ಕಾರ್ಮಿಕ ಸಂಘಟನೆಯಾದ ಬಿಎಂಎಸ್ ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಕೇಂದ್ರ ಸರಕಾರ ಮೋಟಾರು ಕಾಯ್ದೆಯಲ್ಲಿನ ತಿದ್ದುಪಡಿ ಹಿಂದೆಗೆದುಕೊಳ್ಳಬೇಕು, ಇನ್ಸೂರೆನ್ಸ್ ಪ್ರೀಮಿಯಂ ಹೆಚ್ಚಳ ಹಿಂಪಡೆಯಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ.