ನಿಧನ: ಸಿಪಿಎಂ ಹಿರಿಯ ಸದಸ್ಯ ಬಾಬು ಶೆಟ್ಟಿ
ಮಂಗಳೂರು, ಆ.7: ಸಿಪಿಎಂ ಪಕ್ಷದ ಹಿರಿಯ ಸದಸ್ಯ ಬಾಬುಶೆಟ್ಟಿ (85) ಅಸೌಖ್ಯದ ಕಾರಣದಿಂದಾಗಿ ಮಂಗಳವಾರ ಜಪ್ಪಿನಮೊಗರುನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಪಕ್ಷದತ್ತ ಒಲವು ವ್ಯಕ್ತಪಡಿಸಿದ ಬಾಬು ಶೆಟ್ಟಿ, ಬಂದರು ಪ್ರದೇಶದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕಾಲಾವಧಿ ಯಲ್ಲಿ ಅಲ್ಲಿನ ಕಾರ್ಮಿಕ ಸಂಘದ ಮುಖಂಡರಾಗಿ, ಕಾರ್ಮಿಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.
ಪಕ್ಷದ ಅಂದಿನ ಪತ್ರಿಕೆ ಐಕ್ಯರಂಗವನ್ನು ಮಾರಾಟ ಮಾಡುವ ಮೂಲಕ ಸಾಹಿತ್ಯ ಪ್ರಚಾರದಲ್ಲೂ ಮುಂಚೂಣಿಯಲ್ಲಿದ್ದರು. ಜಪ್ಪಿನಮೊಗರುನಲ್ಲಿ ಕಾರ್ಮಿಕ ವರ್ಗದ ಹಾಗೂ ಜನಸಾಮಾನ್ಯರ ಹೋರಾಟಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತಿದ್ದರು. ಪಕ್ಷವನ್ನೇ ತನ್ನ ಜೀವಾಳವನ್ನಾಗಿಸಿದ ಬಾಬು ಶೆಟ್ಟಿ ತನ್ನ ಕೊನೆಯ ಕಾಲಘಟ್ಟದಲ್ಲಿ ಪಕ್ಷದ ಬಗ್ಗೆ ಅತೀವ ಅಭಿಮಾನವನ್ನು ಹೊಂದಿದ್ದರು. ಅಂತಹ ನಿಷ್ಠಾವಂತ ಕಮ್ಯುನಿಸ್ಟ್ ಕಾರ್ಯಕರ್ತ ನಿಧನವು ಜಪ್ಪಿನಮೊಗರುವಿನ ದುಡಿಯುವ ವರ್ಗದ ಚಳುವಳಿಗೆ ನಷ್ಟವುಂಟಾಗಿದೆ ಎಂದು ಸಿಪಿಎಂ ಪಕ್ಷವು ಶ್ರದ್ಧಾಂಜಲಿ ಅರ್ಪಿಸಿದೆ.
ಮೃತರು 4 ಪುತ್ರರು, 2 ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರದಲ್ಲಿ ಸಿಪಿಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಸದಸ್ಯರಾದ ದಿನೇಶ್ ಶೆಟ್ಟಿ, ಸ್ಥಳೀಯ ಪಕ್ಷದ ಮುಖಂಡರಾದ ಚಂದ್ರಹಾಸ ಜೆ., ಉದಯಚಂದ್ರ ರೈ, ಮನೋಜ್ ಶೆಟ್ಟಿ ಮುಂತಾದವರು ಇದ್ದರು.