ಆ. 14ರಂದು ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ನವೀಕರಣ ವಿರೋಧಿಸಿ ಸಾಮೂಹಿಕ ಧರಣಿ: ಮುನೀರ್ ಕಾಟಿಪಳ್ಳ
ಮಂಗಳೂರು, 7: ಸುರತ್ಕಲ್ ಟೋಲ್ ಕೇಂದ್ರದ ಟೋಲ್ ಸಂಗ್ರಹ ಗುತ್ತಿಗೆ ಅವಧಿ ಜುಲೈ 30ಕ್ಕೆ ಕೊನೆಗೊಂಡ ಬಳಿಕ ಸಂಗ್ರಹ ಸ್ಥಗಿತ ಗೊಳಿಸಲಾಗುವುದಾಗಿ ಹೇಳಿದ್ದರೂ ಮತ್ತೆ ಗುತ್ತಿಗೆ ನವೀಕರಣಗೊಳಿಸಿರುವುದನ್ನು ವಿರೋಧಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಾಮೂಹಿಕ ಧರಣಿಯನ್ನು ಆ. 14ರಂದು ಆಯೋಜಿಸಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಿಯಮ ಬಾಹಿರವಾಗಿ ನಡೆಸಲಾಗುತ್ತಿರುವ ಟೋಲ್ ಸಂಗ್ರಹವನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಯಲಿದೆ. ಆ. 14ರಂದು ಬೆಳಗ್ಗೆ 10 ಗಂಟೆಯಿಂದ ಸುರತ್ಕಲ್ ಟೋಲ್ ಕೇಂದ್ರದ ಸಮೀಪ ಒಂದು ದಿನದ ಸಾಮೂಹಿಕ ಧರಣಿ ನಡೆಯಲಿದೆ ಎಂದು ಅವರು ಹೇಳಿದರು.
ಜನತೆಯ ತೀವ್ರ ವಿರೋಧದ ನಡುವೆಯೂ ಸುರತ್ಕಲ್ ಟೋಲ್ ಕೇಂದ್ರವನ್ನು ನಿರ್ಮಿಸಲಾಗಿತ್ತು. ಬಳಿಕ 10 ಕಿ.ಮೀ. ಅಂತರದ ಹೆಜಮಾಡಿಯ ಟೋಲ್ ಕೇಂದ್ರ ಆರಂಭಗೊಂಡ ಬಳಿಕ ಮುಚ್ಚಲಾಗುುದು ಎಂಬ ಭರವಸೆ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾಚರಣೆ ಆರಂಭಿಸಿದ್ದರೂ ಸುರತ್ಕಲ್ನಲ್ಲಿ ಸುಂಕ ವಸೂಲಿಯನ್ನು ನಿಲ್ಲಿಸಲಾಗಲಿಲ್ಲ. ಈ ಬಗ್ಗೆ ಸಮಿತಿಯು ಸ್ಥಳೀಯ ನಾಗರಿಕರ ಬೆಂಬಲದೊಂದಿಗೆ ಸತತ ಹೋರಾಟ ನಡೆಸಿದೆ. ಈ ಸಂದರ್ಭ ರಾಜ್ಯ ಸರಕಾರ ಹಾಗೂ ಹೆದ್ದಾರಿ ಪ್ರಾಧಾಕರಿದ ಸ್ಥಳೀಯ ಕಚೇರಿ ಈ ಬಾರಿಯ ಟೋಲ್ ಸಂಗ್ರಹದ ಅವಧಿ ಪೂರ್ಣಗೊಂಡ ನಂತರ ಸುರತ್ಕಲ್ ಟೋಲ್ ಕೇಂದ್ರ ಮುಚ್ಚಬಹುದು ಎಂಬ ಪ್ರಸ್ತಾಪವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿತ್ತು. ಅದರಂತೆ ಜುಲೈ 30ಕ್ಕೆ ಅವಧಿ ಮುಗಿದಿದೆ. ಆದರೆ ಮತ್ತೆ ಗುತ್ತಿಗೆ ಅವಧಿ ನವೀಕರಣಗೊಳಿಸಿ ಟೋಲ್ ಸಂಗ್ರಹ ಮುಂದುವರಿಸಲಾಗಿದೆ. ಈ ನಡುವೆ ಸಂಸದರು ಕೂಡಾ ಗುತ್ತಿಗೆ ಅವಧಿ ಮುಗಿದ ಬಳಿಕ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಗುತ್ತಿಗೆಯನ್ನು ಮತ್ತೊಂದು ಅವಧಿಗೆ ನಿಯಮಗಳಿಗೆ ವಿರುದ್ಧವಾಗಿ ನವೀಕರಿಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಆಕ್ಷೇಪಿಸಿದರು.
ಟೋಲ್ ಕೇಂದ್ರಗಳ ಕನಿಷ್ಠ ಅಂತರ 40 ಕಿ.ಮೀ. ಇರಬೇಕು ಎಂಬ ನಿಯಮವನ್ನು ಪಾಲಿಸಲಾಗಿಲ್ಲ. ಸುರತ್ಕಲ್ ನಂತೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗಿಲ್ಲ. ಟೋಲ್ ಸಂಗ್ರಹದ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಗುಂಡಿಗಳು ಇರಬಾರದು. ಗುಂಡಿಗಳು ಬಿದ್ದಲ್ಲಿ 48 ಗಅಂಟೆಗಳ ಅವಧಿಯಲ್ಲಿ ಮುಚ್ಚಬೇಕು ಎಂಬ ನಿಯಮವಿದ್ದರೂ ಈ ರಸ್ತೆಯಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಗುಂಡಿಗಳ ರಸ್ತೆಯಲ್ಲಿ ಸಂಚಾರಕ್ಕೆ ಸುಂಕ ಪಾವತಿಸುವ ಪರಿಸ್ಥಿತಿ ನಮ್ಮದಾಗಿದೆ. ಕೂಳೂರು ಸೇತುವೆಯಲ್ಲಂತೂ ಅವೈಜ್ಞಾನಿಕವಾಗಿ ಹಾಕಲಾಗಿರುವ ತೇಪೆಗಳಿಂದ ಸಂಚಾರ ದುಸ್ಥರವಾಗಿದೆ. ರಸ್ತೆ ನಿರ್ವಹಣೆಯ ಗುತಿತಗೆ ಪಡೆದು ವರ್ಷಕ್ಕೆ ಸುಮಾರು ಐದು ಕೋಟಿ ರೂಗಳನ್ನು ಹೆದ್ದಾರಿ ಪ್ರಾಧಿಕಾರ ಪಾವತಿಸುತ್ತಿದೆ. ಆದರೆ ಗುಂಡಿಗಳನ್ನು ಮಾತ್ರ ಮುಚ್ಚಲಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಸ್ಥಳೀಯ ನಗರ ಪಾಲಿಕೆ ಕೂಡಾ ಮಧ್ಯ ಪ್ರವೇಶಿಸುತ್ತಿಲ್ಲ ಎಂದು ಅವರು ದೂರಿದರು.
ನಂತೂರು ಸುರಕ್ಕಲ್ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಹೊರತಾಗಿಯೂ ಟೋಲ್ ಕೇಂದ್ರದ ಗುತ್ತಿಗೆಯನ್ನು ನವೀಕರಿಸಿರುವುದರ ಹಿಂದೆ ಹೆದ್ದಾರಿ ಪ್ರಾಧಿಕಾರ, ಸಂಸದರು, ಗುತ್ತಿಗೆದಾರರ ಅಪವಿತ್ರ ಮೈತ್ರಿ ಕಾರಣ ಎಂದು ಅವರು ಆರೋಪಿಸಿದರು.
ಸುರತ್ಕಲ್ನ ಅಕ್ರಮ ಟೋಲ್ ಕೇಂದ್ರವನ್ನು ತಕ್ಷಣ ಮುಚ್ಚಬೇಕು. ಸರ್ವಿಸ್ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಹೆದ್ದಾರಿ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿ ಮೂಲಕ ಮುಚ್ಚಬೇಕು. ರಸ್ತೆ ನಿರ್ವಹರಣಾ ಗುತ್ತಿಗೆ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು. ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಸಮಿತಿಯು ಧರಣಿ ನಡೆಸಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಗೋಷ್ಠಿಯಲ್ಲಿ ಮನಪಾ ಸದಸ್ಯರಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮುಲ್ಕಿ ವಲಯ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಕೆ.ಯು. ಮೂಸಬ್ಬ, ಲಾರಿ ಮಾಲಕ ರಹೀಂ ಪಕ್ಷಿಕೆರೆ, ಬಸ್ಸು ಮಾಲಕ ಸಮದ್, ಡಿವೈಎಫ್ಐ ಮುಖಂಡರಾದ ಅರ್ಮುಲ್ ಅಹಮ್ಮದ್ ಉಪಸ್ಥಿತರಿದ್ದರು.