ಮಂಗಳೂರು: ಬೀಡಿ ಕಾರ್ಮಿಕರಿಂದ ಧರಣಿ ಸತ್ಯಾಗ್ರಹ
ಮಂಗಳೂರು, ಆ.7: ಕನಿಷ್ಟ ಕೂಲಿ 1 ಸಾವಿರ ಬೀಡಿಗೆ 210 ರೂ. ಜಾರಿಗೊಳಿಸಬೇಕು, ವಾರದಲ್ಲಿ 6 ದಿನ ಕೆಲಸ ನೀಡಬೇಕು, ಕೆಲಸ ನೀಡದ ದಿನದ ವೇತನ ನೀಡಬೇಕು, 2015ರ ಬಾಕಿ ತುಟ್ಟಿಭತ್ತೆಯನ್ನು ನೀಡಬೇಕು ಎಂದು ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರಡೇಶನ್ (ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಬುಧವಾರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 10 ಲಕ್ಷ ಕಾರ್ಮಿಕರು ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಮಿಕರ ಕನಿಷ್ಟ ವೇತನವನ್ನು 2018ರ ಎಪ್ರಿಲ್ 1ರಿಂದ ಅನ್ವಯ ಆಗುವಂತೆ ಪರಿಷ್ಕರಿಸಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಬೀಡಿ ಕಂಪೆನಿಯ ಮಾಲಕರು ಈ ಪರಿಷ್ಕೃತ ಆದೇಶದಂತೆ ವೇತನ ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭ ಫೆಡರೇಶನ್ನ ಅಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಯು.ಬಿ.ಲೋಕಯ್ಯ, ಮುನೀರ್ ಕಾಟಿಪಳ್ಳ, ಸದಾಶಿವ ದಾಸ್, ಗಂಗಯ್ಯ ಅಮೀನ್, ನೋಣಯ್ಯ ಗೌಡ, ಜಯಂತ ನಾಯ್ಕಿ, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ, ವಸಂತಿ ಮತ್ತಿತರರಿದ್ದರು.