ಮೋಟಾರು ವಾಹನ ಮಸೂದೆ-2017 ವಾಪಾಸು ಪಡೆಯಲು ಒತ್ತಾಯಿಸಿ ಮನವಿ
ದ.ಕ.ಜಿಲ್ಲೆಯಲ್ಲಿ ಸಾರಿಗೆ ಮುಷ್ಕರ ಇಲ್ಲ
ಮಂಗಳೂರು, ಆ.7: ಸಾರಿಗೆ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಬದುಕನ್ನು ರಕ್ಷಿಸಲು ಮತ್ತು ಸಾರಿಗೆ ಕ್ಷೇತ್ರವನ್ನು ಉಳಿಸಲು ಹಾಗೂ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೊಳಿಸುವ ಸಲುವಾಗಿ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2017ನ್ನು ಕೇಂದ್ರ ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಷ್ಟ್ರದ ವಿವಿಧ ಕಡೆ ಮುಷ್ಕರ ನಡೆದಿದ್ದರೂ ದ.ಕ.ಜಿಲ್ಲೆಯಲ್ಲಿ ಇದಕ್ಕೆ ಬೆಂಬಲ ವ್ಯಕ್ತವಾಗಿಲ್ಲ. ಆದಾಗ್ಯೂ ಸಿಐಟಿಯು ನೇತೃತ್ವದ ನಿಯೋಗವೊಂದು ದ.ಕ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿತು.
ಈ ಮಸೂದೆಯಿಂದಾಗಿ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯಗಳ ಅಧಿಕಾರ ಮೊಟಕಾಗಲಿದೆ. ಪ್ರಸ್ತುತ ಈ ಮಸೂದೆಯು ದೇಶದ ಸಂವಿಧಾನದ ಮೂಲ ಸ್ಥಂಭವಾದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಮಸೂದೆ ಅಂಗೀಕಾರವಾದಲ್ಲಿ ರಾಜ್ಯಗಳ ಕಾನೂನು ರೂಪಿಸುವ ಹಕ್ಕುಗಳು ನಾಶವಾಗಲಿವೆ. ಏಕ ಗವಾಕ್ಷಿ, ಏಕ ತೆರಿಗೆ ಮತ್ತು ನಿಯಂತ್ರಣ ಪ್ರಾಧಿಕಾರ ಮುಂತಾದ ಹೆಸರಿನಲ್ಲಿ ಎಲ್ಲವನ್ನೂ ಕೇಂದ್ರ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಸೂದೆ ಜಾರಿಯಾದಲ್ಲಿ ರಾಜ್ಯ ಸರಕಾರಗಳ ಆದಾಯ ತೀವ್ರವಾಗಿ ಕಡಿಮೆಯಾಗಲಿದೆ. ವಾಹನಗಳನ್ನು ರೀಕಾಲ್ ಮಾಡುವ ಹೊಸ ಅಧಿಕಾರ ಕೇಂದ್ರ ಸರಕಾರಕ್ಕೆ ಬರಲಿದೆ. ಈ ಮಸೂದೆಯ ಪ್ರಕಾರ ಅಪಘಾತಗಳಿಗೆ ಚಾಲಕರು ಮತ್ತು ನಿರ್ವಾಹಕರನ್ನೇ ಹೊಣೆ ಮಾಡಲಾಗಿದೆ. ಇತಿಮಿತಿಯಿಲ್ಲದ ರೀತಿಯಲ್ಲಿ ದಂಡಗಳ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ರಸ್ತೆಗಳ ಪರಿಸ್ಥಿತಿ, ರಸ್ತೆಗಳ ವಾಹನಾ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ವಾಹನಗಳು ಇತ್ಯಾದಿ ಅಂಶಗಳನ್ನು ಅಪಘಾತಗಳಿಗೆ ಕಾರಣ ಎಂಬುದನ್ನೇ ಈ ಮಸೂದೆ ಪರಿಗಣಿಸದಿರುವುದು ವಿಚಿತ್ರವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಪ್ರಸ್ತುತ ಮಸೂದೆಯ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗಲಿದೆ. ಬಿಡಿ ಭಾಗಗಳ ವ್ಯಾಪಾರಿಗಳು, ರಸ್ತೆ ಬದಿಯ ಸಣ್ಣ ಪುಟ್ಟ ವರ್ಕ್ಶಾಪ್ಗಳು, ರಿಪೇರಿ ಕೆಲಸಗಾರರು ಮುಂತಾದ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಮತ್ತು ಕುಶಲಕರ್ಮಿಗಳು ಕೆಲಸಗಳನ್ನು ಕಳೆದುಕೊಳ್ಳಲಿದ್ದಾರೆ. ಆ ಹಿನ್ನೆಲೆಯಲ್ಲಿ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017ನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ನಗರ ಸಮಿತಿ ಮುಖಂಡರಾದ ನಾಗೇಶ್ ಕೋಟ್ಯಾನ್, ಮುಹಮ್ಮದ್ ಅನ್ಸಾರ್ ನಿಯೋಗದಲ್ಲಿದ್ದರು.