ಮೂಡಾ ಅದಾಲತ್ನಲ್ಲಿ ನೀಡಿದ ಭರವಸೆಯಂತೆ ಸ್ಥಳ ಪರಿಶೀಲಿಸಿದ ಸಚಿವರು
ಮಂಗಳೂರು, ಆ.7: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ಅಹವಾಲು ಸಲ್ಲಿಸಿದ ಜನರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳೊಂದಿಗೆ ಶಕ್ತಿನಗರ, ಸುಲ್ತಾನ್ ಬತ್ತೇರಿ, ಪ್ರಶಾಂತ್ ನಗರಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಪ್ರಥಮವಾಗಿ ಶಕ್ತಿನಗರ ವ್ಯಾಪ್ತಿಯ ಗುರುನಗರಕ್ಕೆ ಭೇಟಿ ನೀಡಿ ರೀಟೈನಿಂಗ್ ವಾಲ್ ಎತ್ತರಿಸಲು ಹಾಗೂ ಸುತ್ತಮುತ್ತಲ ಮನೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ಸೂಚಿಸಿದರಲ್ಲದೆ, ಅಹವಾಲು ನೀಡಿದ ಮಹಿಳೆಗೆ ಭಯಪಡದೆ ನೆಮ್ಮದಿಯಾಗಿರುವಂತೆ ಹೇಳಿದರು.
ಬಳಿಕ ಕೊಂಚಾಡಿ ದೇರೆಬೈಲ್ನ ಪ್ರಶಾಂತಿ ನಗರ ಬಡಾವಣೆಯಲ್ಲಿ ಉದ್ಯಾನ ಅಭಿವೃದ್ಧಿ ಮತ್ತು ಕೆಳಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಸಂಪೂರ್ಣಗೊಳಿಸಿ ನೀಡಲು ಸಂಬಂಧಪಟ್ಟವರಿಗೆ ಸೂಚಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸುಲ್ತಾನ್ ಬತ್ತೇರಿ ವ್ಯಾಪ್ತಿಯಲ್ಲಿ ಮಾಸ್ಟರ್ ಪ್ಲಾನ್ನಂತೆ ರೂಪಿಸಲಾಗಿರುವ ರಸ್ತೆಯ ಅಗತ್ಯತೆಯನ್ನು ಮರುಪರಿಶೀಲನೆ ನಡೆಸಿ, ಈ ಪ್ರದೇಶ ವ್ಯಾಪ್ತಿಯಲ್ಲಿ ಮೂರು ಸೆಂಟ್ಸ್ನ ಮನೆಗಳಿಗೆ ರಸ್ತೆಯಿಂದಾಗಿ ತೊಂದರೆಯಾಗಲಿದೆ ಎಂದು ಅದಾಲತ್ನಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡಾ ಆಯುಕ್ತ ಶ್ರೀಕಾಂತ್ ರಾವ್, ಮನಾಪ ಆಯುಕ್ತ ಮುಹಮ್ಮದ್ ನಝೀರ್, ಶಶಿಧರ್ ಹೆಗಡೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಹವಾಲು ನೀಡಿದವರು ಸ್ಥಳದಲ್ಲಿದ್ದರು.