ಅಕ್ರಮ ಮರಳುಗಾರಿಕೆ: 32 ಶೆಡ್ಗಳ ನೆಲಸಮ
ಮಂಗಳೂರು, ಆ.7: ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ನಿಷೇಧವಿದ್ದರೂ ಅಡ್ಯಾರ್ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಮಂಗಳವಾರ ಭೂ ಮತ್ತು ಗಣಿ ವಿಜ್ಞಾನ, ತಹಶೀಲ್ದಾರ್, ಕಂದಾಯ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 32 ಶೆಡ್ಗಳನ್ನು ನೆಲಸಮ ಮಾಡಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.15ರಿಂದ ಎರಡು ತಿಂಗಳ ಕಾಲ ಮರಳುಗಾರಿಕೆಗೆ ರಜೆ ಘೋಷಣೆಯಾಗಿದ್ದು, ಮರಳುಗಾರಿಕೆ, ಮರಳು ಸಾಗಾಟ ಮಾಡುವಂತಿಲ್ಲ. ಆದರೆ ಅಡ್ಯಾರ್ನಲ್ಲಿ ತಡರಾತ್ರಿ ಮತ್ತು ಬೆಳಗ್ಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸೋಮವಾರ ಹಠಾತ್ ದಾಳಿ ನಡೆಸಿದ್ದರು. ಮರಳುಗಾರಿಕೆ ನಡೆಸುತ್ತಿದ್ದ 25 ಬೋಟುಗಳು ಪತ್ತೆಯಾಗಿದ್ದು, ಕಾರ್ಮಿಕರು ಪರಾರಿಯಾಗಿದ್ದರು.
ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮೂರ್ತಿ, ಕಂದಾಯ ನಿರೀಕ್ಷಕ ಆಸ್ಿ ಇಕ್ಬಾಲ್, ಮಂಗಳೂರು ಕಂದಾಯ ಅಧಿಕಾರಿ ಸ್ಟೀನ್, ಗ್ರಾಮಕರಣಿಕ ನಿಶ್ಮಿತಾ, ಪೂರ್ಣಚಂದ್ರ, ಮೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಕಡಕ್ ಸೂಚನೆ
ಅಕ್ರಮ ಮರಳುಗಾರಿಕೆ ಪ್ರಕರಣ ಗಂಭೀರತೆಯನ್ನು ಅರಿತ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಅವರಲ್ಲಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಕಾರ್ಯಾಚರಣೆ ವೇಳೆ ಸರಕಾರಿ ಜಾಗದಲ್ಲಿದ್ದ 33 ಶೆಡ್, 2ಕಟ್ಟಡ ನೆಲಸಮಗೊಳಿಸಿದ್ದಾರೆ. ವಶಪಡಿಸಿಕೊಂಡ ಮರಳನ್ನು ಟಿಪ್ಪರ್ ಮೂಲಕ ಸ್ಥಳಾಂತರಿಸಲಾಗಿದೆ. ಇದೇ ವೇಳೆ ದಾಸ್ತಾನಿರಿಸಿದ್ದ 30 ಲೋಡ್ ಮರಳನ್ನು ಜಪ್ತಿ ಮಾಡಲಾಗಿದೆ.