ಬಿಜೆಪಿ ಕಾರ್ಯಕರ್ತರಿಂದಲೇ ‘ನಳಿನ್ ಹಠಾವೊ ಕರಾವಳಿ ಕಾರ್ಯಕರ್ತ ಬಚಾವೋ’ ಅಭಿಯಾನ?
ಸಂಸದರ ವಿರುದ್ಧ ಫೇಸ್ಬುಕ್ ಅಭಿಯಾನ!
ಮಂಗಳೂರು, ಆ.8: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ‘ನಳಿನ್ ಹಠಾವೊ ಕರಾವಳಿ ಕಾರ್ಯಕರ್ತ ಬಚಾವೊ’ ಎಂಬ ಹೆಸರಿನ ಫೇಸ್ಬುಕ್ ಪೇಜ್ ಅಭಿಯಾನವೊಂದು ವೈರಲ್ ಆಗಿದೆ.
ಬಿಜೆಪಿ ಕಾರ್ಯಕರ್ತರದ್ದೇ ಎನ್ನಲಾದ ಫೇಸ್ಬುಕ್ ಪೇಜ್ ಮೂಲಕ ಸಂಸದ ನಳಿನ್ ಕುಮಾರ್ ವಿರುದ್ಧ ಅಭಿಯಾನ ನಡೆಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ನಳಿನ್ ಕುಮಾರ್ ವಿರುದ್ಧ ಪೇಜ್ನುದ್ದಕ್ಕೂ ಟೀಕೆ ಮಾಡಲಾಗಿದೆ.
‘‘ಅಸಮರ್ಥ ಸಂಸದ ಮೋದಿ ಸರಕಾರಕ್ಕೆ ಸೂಕ್ತವಲ್ಲ. ನಾನೊಬ್ಬ ಪ್ರಾಮಾಣಿಕ ಮೋದಿ ಅಭಿಯಾನಿಯಾಗಿ ಮೋದಿ ಹೆಸರಿಗೆ ಕಳಂಕ ಬರಲಿಕ್ಕೆ ಅವಕಾಶ ನೀಡುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಖಂಡಿಸುವುದು ಕೂಡಾ ನನ್ನ ಆದ್ಯ ಕರ್ತವ್ಯ’’ ಎಂಬ ಕನ್ನಡದ ಬರಹದೊಂದಿಗೆ’’ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಫೇಸ್ಬುಕ್ ಪೇಜ್ನಲ್ಲಿ ‘ಅಭ್ಯರ್ಥಿ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂಬ ಅಭಿಯಾನವೇ ಮಾಡಲಾಗುತ್ತಿದೆ.
ಇದೇ ವೇಳೆ ಇದೇ ಪೇಜ್ನಲ್ಲಿ ಆಂಗ್ಲ ಭಾಷೆಯಲ್ಲೂ ಸಂಸದ ನಳಿನ್ ವಿರುದ್ಧ ಬರಹಗಳಿವೆ. ‘‘ಮಂಗಳೂರು ಸಂಸದರ ರಿಪೋರ್ಟ್ ಕಾರ್ಡ್’’ ಎಂಬ ಆಂಗ್ಲ ಒಕ್ಕಣೆಯೊಂದಿಗೆ ಆರಂಭವಾಗುವ ಈ ಬರಹದಲ್ಲಿ ನಳಿನ್ ಕುಮಾರ್ ಕಟೀಲು ಬಗ್ಗೆ ಬಿಜೆಪಿ ಕಾರ್ಯಕರ್ತರು ನಿರೀಕ್ಷೆಯನ್ನು ಕಳೆದುಕೊಂಡಿದ್ದಾರೆ ಮತ್ತು ಮೋದಿಯವರಿಗೆ ವರದಿ ನೀಡುತ್ತಿದ್ದಾರೆ.
‘‘ಮೋದಿಯವರೆ, ನಮ್ಮ ಬಗ್ಗೆ ಕಾಳಜಿ ವಹಿಸುವ ಸಂಸದರು ನಮಗೆ ಅಗತ್ಯವಿದೆ’’ ಎಂದೂ ಈ ಪೇಜ್ನಲ್ಲಿ ಬರೆಯಲಾಗಿದೆ.
‘‘ನರೇಂದ್ರ ಮೋದಿಯವರೇ ಇದು ನಮ್ಮ ಎಂ.ಪಿ.ಯವರ ಕೊಡುಗೆ!, ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಹೊಂಡಗಳು ಹಲವು ಅಪಘಾತಗಳಿಗೆ ಕಾರಣವಾಗಿವೆ. ರಸ್ತೆ ಕಾಮಗಾರಿಯ ಲಕ್ಷಣಗಳಿಲ್ಲ. ಸಾವಿನ ರಸ್ತೆಯಾಗಿ ಗೋಚರಿಸುತ್ತಿದೆ. ಕಳೆ ಕೆಲವು ತಿಂಗಳಲ್ಲೇ ಅಪಘಾತಗಳಿಗೆ ಹಲವು ಮಂದಿ ಸಾವಿಗೀಡಾಗಿದ್ದಾರೆ. ಆದರೆ, ದಕ್ಷಿಣ ಕನ್ನಡ ಸಂಸದರು ವಿಫಲರಾಗಿದ್ದರೆ. ದಯವಿಟ್ಟು ಕ್ರಮವನ್ನು ತೆಗೆದುಕೊಳ್ಳಿ’’
‘‘ಎಕ್ಕೂರಿನಿಂದ ಪಂಪವೆಲ್ ರಸ್ತೆಯಲ್ಲಿ ನನ್ನ ಗೆಳೆಯ ರಸ್ತೆ ಅಪಘಾತಕ್ಕೀಡಾಗಿದ್ದ. ಇದಕ್ಕೆ ಕಾರಣ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲೆಯ ಸಂಸದರ ನಿರ್ಲಕ್ಷ’’ ಎಂದು ಆಂಗ್ಲ ಭಾಷೆಯಲ್ಲಿ ಸಂಸದ ನಳಿನ್ ವಿರುದ್ಧ ಟೀಕಾ ಪ್ರಹಾರವೇ ಈ ಫೇಸ್ಬುಕ್ ಪೇಜ್ನಲ್ಲಿ ಮಾಡಲಾಗಿದೆ. ಇದಲ್ಲದೆ ಕನ್ನಡದ ಬರಹವೊಂದರಲ್ಲಿ, ‘‘ನಳಿನ್ ಕುಮಾರ್ ಕಟೀಲು ಅವರಿಗೆ ಈ ಬಾರಿ ದಕ್ಷಿಣ ಕನ್ನಡದಿಂದ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಮತ್ತು ಜಿಲ್ಲೆಯಲ್ಲಿ ನಿಷ್ಟ್ರಿಯ ಸಂಸದರ ಕಾರ್ಯವೈಖರಿಯನ್ನು ವಿವರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಇ-ಮೇಲ್ ಕಳುಹಿಸಿ’’ ಎಂದು ಈ ‘ನಳಿನ್ ಹಠಾವೊ ಕರಾವಳಿ ಕಾರ್ಯಕರ್ತ ಬಚಾವೊ’ ಫೇಸ್ಬುಕ್ ಪೇಜ್ನಲ್ಲಿ ಹೇಳಲಾಗಿದೆ.
ಲೋಕಸಭಾ ಚುನಾವಣೆ ಹತ್ತಿರವಾಗಿರುವಂತೆಯೇ ಈ ರೀತಿ ಫೇಸ್ಬುಕ್ ಪೇಜ್ ಮೂಲಕ ಸಂಸದ ನಳಿನ್ ಬಗ್ಗೆ ಪ್ರಧಾನಿ ಮೋದಿ ಅಭಿಮಾನಿ ಎಂದು ಹೇಳಲಾದವರಿಂದಲೇ ಆಕ್ಷೇಪ, ಟೀಕೆ ವ್ಯಕ್ತವಾಗಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
2014ರ ಲೋಕಸಭಾ ಚುನಾವಣೆಯ ಸಂದರ್ಭ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ನೀಡುವುದಕ್ಕೆ ಸ್ವಪಕ್ಷೀಯರ ಒಂದು ಗುಂಪಿನಿಂದಲೇ ವಿರೋಧ ವ್ಯಕ್ತವಾಗಿತ್ತು. ಅವರ ವಿರುದ್ಧ ಪ್ರಚಾರವೂ ನಡೆದಿತ್ತು. ಇದೇ ಕಾರಣಕ್ಕೆ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತೂ ಕೇಳಿಬಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ನಳಿನ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.