ಮಕ್ಕಳ ಮೇಲೆ ದೌರ್ಜನ್ಯ ನಡೆದ ತಕ್ಷಣ ಸ್ಪಂದಿಸಿ: ನ್ಯಾಯಾಧೀಶ ಕಡ್ಲೂರು
ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ಕಾರ್ಯಕ್ರಮ
ಮಂಗಳೂರು, ಆ.8: ಮಕ್ಕಳ ಹಕ್ಕುಗಳ ಬಗ್ಗೆ ದೇಶದಲ್ಲಿ ಪೂರಕ ಕಾನೂನು ರಚನೆಯಾಗಿದೆ. ಆದರೆ ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಸಮಾಜಕ್ಕೆ ಹೆದರಿ ಮನೆಯವರು ತಕ್ಷಣಕ್ಕೆ ದೂರು ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಮಕ್ಕಳ ಮೇಲೆ ದೌರ್ಜನ್ಯ ಮುಂದುವರಿಯುವ ಅಪಾಯವಿದೆ. ಹಾಗಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆದ ತಕ್ಷಣ ಸ್ಪಂದಿಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಹೇಳಿದರು.
ನಗರದ ನಂತೂರು ಪದವು ಹೈಸ್ಕೂಲ್ ಬಳಿಯ ಸಿಒಡಿಪಿ ಹಾಲ್ನಲ್ಲಿ ಬುಧವಾರ ನಡೆದ ‘ಕಲ್ಪನೆಯೊಂದಿಗೆ ಸಾಧ್ಯತೆಯಡೆಗೆ’ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ನಿರಂತರವಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಇದರಿಂದ ಅನೇಕ ಮಕ್ಕಳು ಬಲಿಪಶುಗಳಾತ್ತಿದ್ದಾರೆ. ಮಕ್ಕಳ ಹಕ್ಕಿಗೆ ಯಾರಿಂದ ಮತ್ತು ಯಾಕೆ ತೊಂದರೆಯಾಗುತ್ತಿವೆ. ಕುಟುಂಬದಲ್ಲಿ ಆಗುವ ತಪ್ಪು ಒಪ್ಪುಗಳಿಂದ ಮಕ್ಕಳು ಸಮಾಜಕ್ಕೆ ಬಂದು ಬೀಳುವಂತಾಗುತ್ತದೆ. ನಮ್ಮಲ್ಲಿ ನೈತಿಕ ಮೌಲ್ಯ ಗಳು ಕುಸಿಯುತ್ತಿದೆ. ಹಾಗಾಗಿ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳು ಜನ್ಮ ನೀಡಿದ ಮಗುವನ್ನು ಆಕೆಯಿಂದ ಕಿತ್ತುಕೊಳ್ಳುವಾಗ ಆಕೆಗೆ ಉಂಟಾಗುವ ಭಾವನಾತ್ಮಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಂತ್ರಸ್ತ ಮಗುವಿಗೆ ಕಾನೂನು ಮೂಲಕ ಆರ್ಥಿಕ ಸೌಲಭ್ಯವನ್ನು ನೀಡಬಹುದು. ಆದರೆ ಮಾನಸಿಕ ನೆಮ್ಮದಿಯನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕ ಎಸ್.ವಿ. ವಾಸುದೇವ ಶರ್ಮ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಆರು ವಲಯಗಳ ಮೂಲಕ ತರಬೇತಿ ನೀಡಲಾಗಿದೆ. ಮಂಗಳೂರಿನಲ್ಲಿ ದ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಉಪಸ್ಥಿತರಿದ್ದರು.