ರಾಜ್ಯಮಟ್ಟದ ಅಂತರ್ ಕಾಲೇಜು ‘ಇಕೊನೊವೆನ್ಜಾ 2018’ ಹಬ್ಬ
ಮಂಗಳೂರು, ಆ.8: ನಗರದ ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರಕಾಲೇಜು ‘ಇಕೊನೊವೆನ್ಜಾ 2018’ ಹಬ್ಬವು ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆಯಲ್ಲಿ ಮಂಗಳವಾರ ಕಾಲೇಜಿನ ಎರಿಕ್ ಮಥಾಯಸ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ಡಿಸಿಪಿ ಹನುಮಂತರಾಯ ಈ ಶಿಕ್ಷಣ ಸಂಸ್ಥೆಯು ದೇಶಾದ್ಯಂತ ಉತ್ತಮ ವಿದ್ಯಾರ್ಥಿ ಬಳಗವನ್ನು ಹೊಂದಿದೆ. ವಿದ್ಯಾರ್ಥಿಗಳು ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೂಲಶಿಕ್ಷಣದ ಜೊತೆ ಪೂರಕ ಕೌಶಲ್ಯಗಳನ್ನು ಹೊಂದುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ಮಾದಕವಸ್ತುಗಳಿಗೆ ಮತ್ತು ದುಷ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು ಮತ್ತು ಅನಗತ್ಯ ಮೊಬೈಲ್ ಬಳಕೆ ಮಾಡುವ ಬದಲು ಎನ್ನೆಸ್ಸೆಸ್ ಮತ್ತು ಎನ್ಸಿಸಿ ಮುಂತಾದ ಸಂಘಗಳಿಗೆ ಸೇರಿ ಸಮಾಜಕ್ಕೆ ಸಹಕಾರಿಯಾಗುವಂತಹ ಕೆಲಸಗಳನ್ನು ಮಾಡಬೇಕು ಎಂದು ಹನುಮಂತರಾಯ ಕರೆ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಿಯು ಕಾಲೇಜಿನ ಪ್ರಾಂಶುಪಾಲ ಫಾ.ಮೆಲ್ವಿನ್ ಮೆಂಡೊನ್ಸಾ, ನಟ ಅರ್ಜುನ್ ಕಾಪಿಕಾಡ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕ ಡಾ. ನೋಬರ್ಟ್ ಲೋಬೊ, ಸಹ ಸಂಯೋಜಕ ಆಲ್ವಿನ್ ಮಿಸ್ಕಿತ್ ಮತ್ತು ರೆಜಿ ಜಾಬ್, ವಿದ್ಯಾರ್ಥಿ ಸಂಯೋಜಕ ಸೋಹನ್ ಆಳ್ವ, ಕಾರ್ಯದರ್ಶಿ ಜುಡಿತ್ ಕೋಟ್ಸು, ಕುಲಸಚಿವ ಡಾ.ಎ.ಎಂ. ನರಹರಿ, ಹಣಕಾಸು ಅಧಿಕಾರಿ ಫಾ. ಪ್ರದೀಪ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.