ತಿರುಪತಿ, ಶಬರಿಮಲೆ ದೇವಸ್ಥಾನಗಳಲ್ಲಿ ತುಳುವಿನಲ್ಲಿ ಮಾಹಿತಿ ನೀಡಲು ಒತ್ತಾಯ
ಮಂಗಳೂರು, ಆ.8: ತುಳುವರು ಹೆಚ್ಚಾಗಿ ಭೇಟಿ ನೀಡುತ್ತಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಮತ್ತು ಕೇರಳದ ಶಬರಿ ಮಲೆ ಅಯ್ಯಪ್ಪ ದೇವಸ್ಥಾನಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುಳುಭಾಷೆಯಲ್ಲಿ ಸಾರ್ವಜನಿಕ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕೆಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ. ಸಿ. ಭಂಡಾರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಎರಡೂ ದೇವಸ್ಥಾನಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು ತಿರುಪತಿಯ ತಿರುಮಲ ದೇವಸ್ಥಾನಗಳಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಸಾವಿರಾರು ಮಂದಿ ವರ್ಷಂಪ್ರತಿ ಮುಡಿಪು ಅರ್ಪಿಸುವ ಉದ್ದೇಶದಿಂದ ಭೇಟಿ ನೀಡುತ್ತಾರೆ. ಈ ಸಂದರ್ಭ ಕುಟುಂಬದ ಹೊರಿಯರ ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಅಲ್ಲಿಯ ವ್ಯವಸ್ಥೆ ಹಾಗೂ ಭಾಷಾ ಸಮಸ್ಯೆಯ ಅರಿವಿಲ್ಲದೆ ಹಲವಾರು ಮಂದಿ ನಾಪತ್ತೆಯಾಗುತ್ತಿರುವುದು ಗಮನಾರ್ಹ. ಅದಲ್ಲದೆ ಶಬರಿಮಲೆ ಅಯ್ಯಪ್ಪಕ್ಷೇತ್ರಕ್ಕೆ ಕೂಡಾ ಸಾಕಷ್ಟು ಸಂಖ್ಯೆಯ ತುಳುವರು ಭೇಟಿ ನೀಡುತ್ತಾರೆ. ಅಲ್ಲೂ ಭಾಷಾ ಸಮಸ್ಯೆ ಎದಯರಾಗುತ್ತಿದೆ. ಇದರಿಂದ ಎದುರಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಲು ತುಳುವಿನಲ್ಲಿ ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.