ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು: ಯುವಸ್ಪಂದನ ಅರಿವು ಕಾರ್ಯಕ್ರಮ
ಬಂಟ್ವಾಳ, ಆ. 8: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಯುವಸ್ಪಂದನ ಅರಿವು ಕಾರ್ಯಕ್ರಮ ಬುಧವಾರ ನಡೆಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಫರ್ವಿನ್ ಅವರು ಮುಖ್ಯ ಅತಿಥಿಗಳಾಗಿ ಯುವ ಸ್ಪಂದನ ಕೇಂದ್ರದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನೀಡಿ, ಯುವ ಜನರಿಗಾಗಿ ಸುರಕ್ಷಿತ ಕುಟುಂಬ ಮತ್ತು ಸಮಾಜವನ್ನು ನಿರ್ಮಿಸುವುದೇ ಈ ಕೇಂದ್ರದ ಮುಖ್ಯ ಉದ್ದೇಶ. ವೈಯಕ್ತಿಕ ಬೆಂಬಲ, ದೂರವಾಣಿ ಮುಖಾಂತರ ಬೆಂಬಲ, ಪಠ್ಯ ಮತ್ತು ವೃತ್ತಿಪರ ಮಾರ್ಗದರ್ಶನ, ಆಪ್ತ ಸಮಾಲೋಚನೆ, ಸ್ವಯಂ ಅಭಿವೃದ್ಧಿಗೆ ಭಾವನಾತ್ಮಕ ಬೆಂಬಲ ನೀಡುವ ಮೂಲಕ ಜನರೊಂದಿಗೆ ನಾವಿದ್ದೇವೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್ ಮಾತನಾಡಿ, ಯುವಸ್ಪಂದನ ಕೇಂದ್ರವು ಯುವ ಜನರಿಗೆ ಸಂಬಂಧಿಸಿದ ವಿಷಯಗಳಿಗಾಗಿ ಇರುವ ಮಾರ್ಗದರ್ಶನ ಕೇಂದ್ರ. ಮಾರ್ಗದರ್ಶನಕ್ಕಾಗಿ, ಆಪ್ತ ಸಲಹೆಗಾಗಿ ಎಲ್ಲಾ ವಯೋಮಾನದವರು ಈ ಕೇಂದ್ರವನ್ನು ಸದಾ ಸಂಪರ್ಕಿಸಬಹುದು. ಅವರು ಏರ್ಪಡಿಸುವ ಕಾರ್ಯಾಗಾರಗಳಲ್ಲಿ/ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆದುಕೊಳ್ಳಬಹುದು ಎಂದರು.
ವೈಯಕ್ತಿಕ ಅಥವಾ ನೆರೆಹೊರೆಯವರ ಸಮಸ್ಯೆಗಳಿಗೂ ಈ ಕೇಂದ್ರದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು. ದೂರವಾಣಿ ಮೂಲಕವೂ ಭಾವನಾತ್ಮಕ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆಯನ್ನು ನೀಡುವ ಈ ಕೇಂದ್ರವನ್ನು ಬಳಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ದೇವಿಪ್ರಸಾದ್ ಅವರು ಪ್ರಸ್ತಾವಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ, ಜ್ಞಾನೇಶ್ವರಿ ಹಾಗೂ ಸುಶ್ಮಿತಾ ತಂಡ ಪ್ರಾರ್ಥಿಸಿ, ಶ್ರದ್ಧಾ ಯುವರಾಜ್ ಬಲ್ಲಾಳ್ ಸ್ವಾಗತಿಸಿ, ರಾಜೇಶ್ ವಂದಿಸಿ, ಮೆಲ್ರಿಯಾ ಡೀನಾ ಕ್ಯಾಸ್ತೆಲಿನೊ ನಿರೂಪಿಸಿದರು. ಕಾಲೇಜಿನ ಎಲ್ಲ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.