ಮಂಗಳೂರು: ಬಸ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ
ಮಂಗಳೂರು, ಆ. 8: ದ.ಕ. ಬಸ್ ಮಾಲಕರ ಸಂಘದ 37ನೇ ವಾರ್ಷಿಕ ಮಹಾಸಭೆಯು ನಗರದ ಕ್ವಾಲಿಟಿಯ ‘ನಮ್ಮ ಕುಡ್ಲ’ದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ. ಕಾವೂರು ಮಾತನಾಡಿ, ಮಂಗಳೂರು ನಗರದಲ್ಲಿ ಸಂಚರಿಸುವ 345 ಸಿಟಿ ಬಸ್ಗಳಲ್ಲಿ 2017-18ರ ಸಾಲಿನಲ್ಲಿ ಸುಮಾರು 2,702 ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸುಗಳನ್ನು ಸಂಘ ನೀಡಿದೆ. ವಿದ್ಯಾರ್ಥಿ ಸಮುದಾಯಕ್ಕೆ ಬಸ್ ದರದಲ್ಲಿ ರಿಯಾಯಿತಿ ರೂಪದಲ್ಲಿ ಬಸ್ ಮಾಲಕರ ಇದುವರೆಗಿನ ಒಟ್ಟು ಕೊಡುಗೆ 14.37 ಕೋಟಿ ರೂ.ಆಗಿದೆ. ಅಂಗವಿಕಲರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಪೂರ್ಣ ಪ್ರಮಾಣದ ರಿಯಾಯಿತಿ ಪಾಸುಗಳನ್ನು ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಿರಿಯ ನಾಗರಿಕರಿಗೆ ಹೆಚ್ಚಿನ ಶಿಸ್ತು ಬದ್ಧ ಸಂಚಾರ ವ್ಯವಸ್ಥೆಯನ್ನು ನೀಡಬೇಕು ಎಂದು ತಿಳಿಸಿದರು. 2018-19ರ ಸಾಲಿಗೆ ಅಧ್ಯಕ್ಷರಾಗಿ ದಿಲ್ರಾಜ್ ಆಳ್ವ, ಉಪಾಧ್ಯಕ್ಷರಾಗಿ ಶ್ರೀಧರ್ ರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಶೇಖ, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ್ ಎಂ. ಹಾಗೂ ಕೋಶಾಧಿಕಾರಿಯಾಗಿ ಸುಶಿತ್ ಜಿ. ಶೆಟ್ಟಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ 50 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ. ಕಾವೂರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸತೀಶ್ ತಲಪಾಡಿ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ವಂದಿಸಿದರು.