ತಾಯಿ-ಮಗುವಿನ ಅಸಹಜ ಸಾವು: ತನಿಖೆಗೆ ಒತ್ತಾಯ
ಉಡುಪಿ, ಆ.8: ಮುಲ್ಕಿ ಠಾಣಾ ವ್ಯಾಪ್ತಿಯ ಗೇರುಕಟ್ಟೆ ಜೂನಿಯರ್ ಕಾಲೇಜು ಸಮೀಪದ ನಿವಾಸಿ ಸುಜಾತ (40) ತನ್ನ ಎಂಟು ವರ್ಷದ ಕೃತಿಕಾಳೊಂದಿಗೆ ಆ.2ರಂದು ಬೆಳಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಶಯಾಸ್ಪದವಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತಳ ತಮ್ಮ ಪ್ರಶಾಂತ್ ಹಾಗೂ ತಂಗಿ ಆಶಾ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ದಸಂಸ (ಅಂಬೇಡ್ಕರ್ವಾದ) ಪಡುಬಿದ್ರಿ ಗ್ರಾಮ ಶಾಖೆಯ ಪ್ರಧಾನ ಸಂಚಾಲಕ ಲೋಕೇಶ್ ಅಂಚನ್ ಈ ಸಂಬಂಧ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಇವರು, ತಮ್ಮ ಅಕ್ಕನಿಗೆ ಗಂಡ ಹಾಗೂ ಮೂವರು ನಾದಿನಿಯರು ನೀಡಿದ ಕಿರುಕುಳದಿಂದಲೇ ಸಾವನ್ನಪ್ಪಿರಬೇಕೆಂಬ ಸಂಶಯ ನಮಗೆ ಮೂಡಿದೆ ಎಂದು ವಿವರಿಸಿದರು.
ತಾಲೂಕಿನ ಮೂಡುಬೆಟ್ಟು ಗ್ರಾಮದ ಶಂಕರಪುರದವರಾದ ಸುಜಾತಳನ್ನು 14 ವರ್ಷಗಳ ಹಿಂದೆ ಬ್ಯಾಂಕ್ ನೌಕರರಾದ ಗೇರುಕಟ್ಟೆಯ ಸುಧಾಕರ ಎಂಬರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಕೃತಿಕಾ (8) ಎಂಬ ಹೆಣ್ಣು ಮಗುವಿದ್ದು, ಅನ್ಯೋನ್ಯತೆ ಇದ್ದ ಸಂಸಾರದಲ್ಲಿ ನಾದಿನಿಯರಿಂದ ಕಿರುಕುಳ, ಜಗಳಗಳು ಉಂಟಾಗುತಿದ್ದವು. ಈ ಸಂದರ್ಭದಲ್ಲಿ ನಮ್ಮ ಮಾವ ಸುರೇಶ್ ರಾಜಿ ಪಂಚಾಯಿತಿ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುತಿದ್ದರು ಎಂದು ದೂರಿದರು.
ಕಳೆದ ಆ. 2ರಂದು ಬೆಳಗ್ಗೆ ಸುಜಾತ ಹಾಗೂ ಕೃತಿಕಾಳ ಶವ ಬಾವಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ತಿಳಿದು ನಾನು ಗೇರುಕಟ್ಟೆಯ ಮನೆಗೆ ಹೋದಾಗ ತಿಳಿದುಬಂತು ಎಂದು ಪ್ರಶಾಂತ್ ವಿವರಿಸಿದರು. ಸುಧಾಕರ ಹೇಳುವಂತೆ ತಾನು 8:30ಕ್ಕೆ ಮಗುವಿಗೆ ತಿನ್ನಿಸಿ 9:30ಕ್ಕೆ ಕೆಲಸ ಹೋಗಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದರೆ ಅರ್ಧಗಂಟೆಯಲ್ಲಿ ಅಕ್ಕ ಆತ್ಮಹತ್ಯೆ ಮಾಡಿಕೊಂಡು ಅರ್ಧ ಗಂಟೆಯಲ್ಲಿ ಹೆಣ ಬಾವಿ ನೀರಿನಲ್ಲಿ ತೇಲಲು ಸಾಧ್ಯವೇ ಎಂದವರು ಪ್ರಶ್ನಿಸಿದರು.
ಅಲ್ಲದೇ ಮಗುವಿನ ಬಾಯಿಯಲ್ಲಿ ನೊರೆ ಬಂದಿದ್ದು, ಸುಜಾತಳ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಪೊಲೀಸರು ಹೆಣವನ್ನು ಮೇಲಕ್ಕೆತ್ತಿ ಆಸ್ಪತ್ರೆ ಒಯ್ದಿದ್ದರು ಎಂದರು. ತಾವೆಲ್ಲರೂ ಮರಣ ಪತ್ರಕ್ಕಾಗಿ ಆಕೆಯ ರೂಮನ್ನು ಹುಡುಕಿದ್ದು ಏನೂ ಸಿಕ್ಕಿರಲಿಲ್ಲ. ಆದರೆ ಮರುದಿನ ಸುಧಾಕರನಿಗೆ ಆಕೆ ಬರೆದಿದ್ದೆಂದು ಹೇಳಲಾದ ಪತ್ರ ಸಿಕ್ಕಿದ್ದು, ಇದು ಸಂಶಯಕ್ಕೆ ಕಾರಣವಾಗಿದೆ. ಅದರಲ್ಲಿರುವ ಬರವಣಿಗೆ ಹಾಗೂ ಸಹಿ ಅಕ್ಕನದ್ದಲ್ಲ ಎಂದು ಪ್ರಶಾಂತ್ ಹಾಗೂ ಆಶಾ ನುಡಿದರು.
ಆದುದರಿಂದ ಅಕ್ಕನ ಅಸಹಜ ಸಾವಿನ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆದು ತಮ್ಮ ಅಕ್ಕನಿಗೆ ಕಿರುಕುಳ ನೀಡುತಿದ್ದ ಸುಧಾಕರ ಹಾಗೂ ನಾದಿನಿಯರಾದ ಚಂದ್ರಿಕ, ಜಯಲಕ್ಷ್ಮೀ ಮತ್ತು ಸುಂಗಧಿ ಇವರನ್ನು ತನಿಖೆ ಗೊಳಿಪಡಿಸಬೇಕೆಂದು ಅವರು ಮನವಿ ಮಾಡಿಕೊಂಡರು.
ಈ ಕುರಿತು ಮನವಿ ಪತ್ರವನ್ನು ತಾವು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮಂಗಳೂರಿನ ಜಿಲ್ಲಾಧಿಕಾರಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರಿನ ಡಿವೈಎಸ್ಪಿ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ನೀಡಿರುವುದಾಗಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಜಾತಳ ಮಾವ ಸುರೇಶ್ ಎರ್ಮಾಳ್, ಪ್ರದೀಪ್ರಾಜ್, ಗುಣಕರ ಕೆ.ಎಸ್. ಉಪಸ್ಥಿತರಿದ್ದರು.