ಉಡುಪಿ, ಮಂಗಳೂರಲ್ಲಿ ಪೌರ ರಕ್ಷಣಾ ಘಟಕ: ರೂಪಾ ಮೌದ್ಗಿಲ್
ಉಡುಪಿ, ಆ.8: ಬೆಂಗಳೂರು ನಂತರ ಉಡುಪಿ ಮತ್ತು ಮಂಗಳೂರುಗಳಲ್ಲಿ ಪೌರ ರಕ್ಷಣಾ ಘಟಕ (ಸಿವಿಲ್ ಡಿಫೆನ್ಸ್ ಯುನಿಟ್)ವನ್ನು ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಈ ಘಟಕವನ್ನು ಬಳಸಿಕೊಳ್ಳಲಾಗುತ್ತದೆ ಎಂದು ರಾಜ್ಯ ಗೃಹರಕ್ಷಕ ದಳ ಹಾಗೂ ಪೌರರಕ್ಷಣೆಯ ಐಜಿಪಿ ರೂಪಾ ಡಿ. ಮೌದ್ಗಿಲ್ ಹೇಳಿದ್ದಾರೆ.
ಬುಧವಾರ ಉಡುಪಿ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಇದರ 65 ಘಟಕಗಳು ಕಾರ್ಯಾಚರಿಸುತ್ತಿವೆ. ಒಂದೊಂದು ಘಟಕದಲ್ಲಿ ಸುಮಾರು 100 ಮಂದಿ ಇದ್ದು, ಇವರಲ್ಲಿ ವಿದ್ಯಾರ್ಥಿಗಳು, ವೈದ್ಯರು, ಟೆಕ್ಕಿಗಳು, ಶಿಕ್ಷಕರೂ ಸೇರಿದ್ದಾರೆ ಎಂದು ರೂಪಾ ನುಡಿದರು.
ಈಗಾಗಲೆ ಚೀಫ್ ವಾರ್ಡನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಹಾಗೂ ಉಡುಪಿಯಿಂದ 2 ಅರ್ಜಿಗಳು ಬಂದಿವೆ. ಇದಕ್ಕೆ ಸೇರಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನರು ಸ್ವಯಂಸ್ಪೂರ್ತಿ ಯಿಂದ ಇದಕ್ಕೆ ಸೇರ್ಪಡೆಗೊಳ್ಳಲು ಮುಂದಾಬೇಕು ಎಂದು ಮನವಿ ಮಾಡಿದರು.
ಈಗಾಗಲೆ ಚೀಫ್ ವಾರ್ಡನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಹಾಗೂ ಉಡುಪಿಯಿಂದ 2 ಅರ್ಜಿಗಳು ಬಂದಿವೆ. ಇದಕ್ಕೆ ಸೇರಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನರು ಸ್ವಯಂಸ್ಪೂರ್ತಿ ಯಿಂದ ಇದಕ್ಕೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು. ಗೃಹರಕ್ಷಕರಿಗೆ ರೇಶನ್, ವಿಮೆ: ಗೃಹರಕ್ಷಕದಳ ಸಿಬ್ಬಂದಿಗಳಿಗೆ ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಸಿಗುವ ರೀತಿಯಲ್ಲಿ ರೇಶನ್ ಹಾಗೂ ಜೀವವಿಮಾ ಸೌಲಭ್ಯ ಒದಗಿಸುವ ಬಗ್ಗೆ ಚಿಂನೆ ನಡೆದಿದೆ ಎಂದವರು ತಿಳಿಸಿದರು.
ಗೃಹರಕ್ಷಕ ದಳ ನೌಕರರು, ಸರಕಾರದ ಖಾಯಂ ನೌಕರರಲ್ಲದ ಕಾರಣ ರೇಶನ್ ಮತ್ತು ಜೀವವಿಮೆ ಸೇರಿದಂತೆ ಕೆಲವು ಸೌಲಭ್ಯಗಳನ್ನು ನೀಡಲು ತೊಡಕುಂಟಾಗುತ್ತಿದೆ. ಗೃಹರಕ್ಷಕ ದಳದ ಕಾಯಿದೆ ಸ್ವರೂಪವೇ ಹಾಗಿದೆ. ಹೀಗಾಗಿ ದಿನನಿತ್ಯ ಪರೇಡ್ನಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಮಾತ್ರ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.
ಗೃಹರಕ್ಷಕ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ. ಆದರೆ ಸಂಬಂಧಪಟ್ಟ ಆಕ್ಟ್ನಲ್ಲಿಯೆ ಅದನ್ನು ಸೇವೆ ಎಂದು ಪರಿಗಣಿಸಲಾಗಿದೆ. ಖಾಯಂ ಮಾಡುವುದು, ವೇತನ ಹೆಚ್ಚಿಸುವುದು, ಇತರೆ ಭತ್ಯೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಕಾಯಿದೆಯನ್ನೇ ಬದಲಾಯಿಸಬೇಕಾಗುತ್ತದೆ. ಸಿಬ್ಬಂದಿಗಳನ್ನು ಖಾಯಂ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಅದು ನಮ್ಮ ಕೈನಲ್ಲಿ ಸಾಧ್ಯವಿಲ್ಲ, ಸರಕಾರಕ್ಕೆ ಬಿಟ್ಟ ನಿರ್ಧಾರ ಎಂದು ವಿವರಿಸಿದರು.
ಗೃಹರಕ್ಷಕದಳ ಸಿಬ್ಬಂದಿಗಳು ಆರ್ಟಿಒ, ಅಬಕಾರಿ, ಪೊಲೀಸ್ ಇಲಾಖೆಗೆ ನಮ್ಮನ್ನು ಕಳುಹಿಸಿಕೊಡಿ ಎಂದು ಹೆಚ್ಚಿನ ಬೇಡಿಕೆ ಇಡುತ್ತಾರೆ. ಕೆಲವು ಕಡೆ ಅವಧಿ ಮುಗಿದರೂ ಅಲ್ಲೇ ಕೆಲಸ ನಿರ್ವಹಿಸುತ್ತಾರೆ. ಈ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆಟೊಮೆಟಿಕ್ ಡ್ಯೂಟಿ ರೊಟೇಶನ್ ವ್ಯವಸ್ಥೆ ಜಾರಿಗೆ ತರಲಾಗುವುದು. ಕೆಲವು ಇಲಾಖೆಗಳ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ದಿನಭತ್ಯೆ ಸಿಗದ ದೂರುಗಳಿದ್ದು, ಬಜೆಟ್ನಲ್ಲಿ ಸಮಸ್ಯೆಯಿಂದ ಹೀಗಾಗಿದೆ ಎಂದರು.
ಬೋಗಸ್ ಬಿಲ್ಗೆ ಕಡಿವಾಣ: ಗೃಹ ರಕ್ಷಕ ಇಲಾಖೆಯಲ್ಲಿ ತರಬೇತಿ, ಸಿಬ್ಬಂದಿಗಳ ಸಭೆ ವಿಚಾರದಲ್ಲಿ ಬೋಗಸ್ ಬಿಲ್ ಮಾಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ತರಬೇತಿ ವೇಳೆ ಭಾಗವಹಿಸಿದ ಜನರ ಸಂಖ್ಯೆಯನ್ನು ಹೆಚ್ಚಿಸಿ, ಸುಳ್ಳು ಲೆಕ್ಕ ತೋರಿಸಿ ದುಪ್ಪಟ್ಟು ಬಿಲ್ ಮಾಡಿ ಸರಕಾರಕ್ಕೆ ವಂಚಿಸಲಾ ಗುತ್ತಿದೆ ಎಂಬ ದೂರುಗಳು ಸಾಕಷ್ಟು ನನಗೆ ಬರುತ್ತಿವೆ. ಕಾರವಾರದಲ್ಲಿ ಇದಕ್ಕೆ ಸಂಬಂಧಿಸಿ ಪ್ರಕರಣ ಸಹ ದಾಖಲಾಗಿದೆ ಎಂದು ರೂಪ ತಿಳಿಸಿದರು.
ಇದನ್ನು ತಡೆಯುವ ಸಲುವಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಎಷ್ಟು ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು, ತರಬೇತಿ ಪಡೆದುಕೊಂಡಿದ್ದಾರೆ ಎಂಬುದು ಈ ಮೂಲಕ ತಿಳಿಯುತ್ತದೆ ಎಂದರು.
ಬೆಂಗಳೂರು ಪರಪ್ಪನ ಅಗ್ರಹಾರ ಅವ್ಯವಹಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ವರದಿ ಸಿಕ್ಕಿಲ್ಲ. ವರದಿಗಾಗಿ ಆರ್ಟಿಐನಡಿ ಅರ್ಜಿ ಹಾಕಿದ್ದೇನೆ ಎಂದು ರೂಪಾ ತಿಳಿಸಿದರು.
ಕಚೇರಿಗೆ ಭೇಟಿ, ಸಮಾಲೋಚನೆ: ರೂಪಾ ಮೌದ್ಗಿಲ್ ಅವರು ಬುಧವಾರ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ, ಗೃಹ ರಕ್ಷಕದಳ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾ ಕಮಾಂಡೆಂಟ್ ಮತ್ತು ಗೃಹ ರಕ್ಷಕ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಗೃಹರಕ್ಷಕದಳ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗೃಹ ರಕ್ಷಕ ದಳ ಅಸಿಟ್ಟೆಂಟ್ ಕಮಾಂಡೆಟ್ ಕೆ.ಸಿ ರಾಜೇಶ್, ದಕ್ಷಿಣ ಕನ್ನಡ ಜಿಲ್ಲೆ ಡೆಪ್ಯುಟಿ ಅಸಿಸ್ಟೆಂಟ್ ಕಮಾಂಡೆಂಟ್ ರಮೇಶ್ ಉಪಸ್ಥಿತರಿದ್ದರು.