ಆ.10ರಂದು ಎಲ್ಐಸಿ ಪ್ರತಿನಿಧಿಗಳಿಂದ ಧರಣಿ, ಮುಷ್ಕರ
ಉಡುಪಿ, ಆ.8: ದೇಶದಲ್ಲಿ 28 ಕೋಟಿ ಮಂದಿ ಪಾಲಿಸಿದಾರರನ್ನು ಹೊಂದಿರುವ ಭಾರತ ಜೀವವಿಮಾ ನಿಗಮ (ಎಲ್ಐಸಿ)ವನ್ನು ಅಸ್ಥಿರಗೊಳಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು ವಿರೋಧಿಸಿ ಅಖಿಲ ಭಾರತ ಜೀವವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ಆ.10ರಂದು ಶುಕ್ರವಾರ ದೇಶಾದ್ಯಂತವಿಭಾಗೀಯ ಎಲ್ಐಸಿ ಕಚೇರಿಗಳ ಮುಂದೆ ಧರಣಿ, ಮುಷ್ಕರ ನಡೆಸಲಿವೆ.
ಉಡುಪಿ ವಿಭಾಗೀಯ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಎ.ಎಸ್.ಲೋಕೇಶ್ ಶೆಟ್ಟಿ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇದೀಗ ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಎಲ್ಐಸಿ ಸಂಸ್ಥೆಯು ದೇಶದ ಆರ್ಥಿಕ ಸ್ವಾವಲಂಬನೆಗೆ ಅಕ್ಷಯಪಾತ್ರೆ ಇದ್ದಂತೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆ ಅನುಷ್ಠಾನಕ್ಕೆ ನಿರಂತರ ಹಣ ಸಹಾಯವನ್ನು ಸಾಲದ ರೂಪದಲ್ಲಿ ಮಾಡುತ್ತಾ ಬಂದಿದೆ. ಇದೀಗ ಈ ಸಂಸ್ಥೆಯನ್ನು ವಿಮೆಯಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.49ಕ್ಕೆ ಹೆಚ್ಚಿಸಿ, ಖಾಸಗಿ ಜೀವವಿಮಾ ಕಂಪೆನಿಗಳಿಗೆ ಅನುಕೂರವಾಗುವಂತೆ ಐಆರ್ಡಿಎಯನ್ನು ಸ್ಥಾಪಿಸಿ ಹೊಸದಾಗಿ ಎಲ್ಲಾ ಪಾಲಿಸಿಗಳ ಕಂತಿನ ಮೇಲೆ ಶೇ.4.5ರಷ್ಟು ಜಿಎಸ್ಟಿ ತೆರಿಗೆಯನ್ನು ಪಾವತಿದಾರರೇ ಪಾವತಿಸುವಂತೆ ಜಾರಿಗೆ ತರಲಾಗಿದೆಎಂದವರು ದೂರಿದರು.
ಸರಕಾರದ ಹೊಸ ಕ್ರಮದಿಂದಾಗಿ ಈಗ ಎರಡು ವರ್ಷದವರೆಗೆ ಕಂತು ತುಂಬದೇ ಲ್ಯಾಪ್ಸ್ ಆದ ಪಾಲಿಸಿಗಳನ್ನು ಪುನರುಜ್ಜೀವನ ಗೊಳಿಸಲು ಸಾಧ್ಯವಿಲ್ಲದಂತೆ ನಿರ್ಬಂಧಿಸಲಾಗಿದೆ. ಅದೇ ರೀತಿ ಇತರ ಕೆಲವು ಕ್ರಮಗಳಿಂದಾಗಿ ಪಾಲಿಸಿದಾರರ ವಿಶ್ವಾಸ ಈಗ ಸಂಸ್ಥೆಯ ಮೇಲೆ ಕಡಿಮೆ ಯಾಗುವಂತಾಗಿದೆ ಎಂದವರು ಆರೋಪಿಸಿದರು.
ಕಳೆದ 60 ವರ್ಷಗಳಿಂದ ಎಲ್ಐಸಿ ಸಂಸ್ಥೆ ಹಾಗೂ ಪಾಲಿಸಿದಾರರ ಮಧ್ಯೆ ಸೇತುವೆಯಾಗಿ ಕೆಲಸ ನಿರ್ವಹಿಸುತಿದ್ದ ಜೀವವಿಮಾ ಪ್ರತಿನಿಧಿಗಳ ಮೇಲೆ ಹೊಸ ಹೊಸ ನೀತಿಗಳನ್ನು ಹೇರಿದ ಪರಿಣಾಮ ಅವರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕಮಿಷನ್ ದರ ಹೆಚ್ಚಳವಿಲ್ಲ, ಗುಂಪು ವಿಮೆ ಇಲ್ಲ, ಪಿಂಚಣಿ, ಕಲ್ಯಾಣ ನಿಧಿ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲದಂತಾಗಿದೆ ಎಂದರು.
ಹೀಗಾಗಿ ದೇಶಾದ್ಯಂತ ಇರುವ 12 ಲಕ್ಷ ಪ್ರತಿನಿಧಿಗಳು ತಮ್ಮ ಹತ್ತು ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ.10ರಂದು ದೇಶಾದ್ಯಂತ ಎಲ್ಐಸಿ ವಿಭಾಗೀಯ ಕಚೇರಿಗಳ ಮುಂದೆ ಧರಣಿ ನಡೆಸಿ ಎಲ್ಐಸಿಯ ಅಧ್ಯಕ್ಷರಿಗೆ ಬೇಡಿಕೆಗಳ ಮನವಿ ಅರ್ಪಿಸಲಾಗುವುದು. ಧರಣಿಗೆ ಸಿಐಟಿಯು, ಎಐಐಇಎ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಕಿಲಾ ಅಡ್ಯಂತಾಯ, ಜಂಟಿ ಕಾರ್ಯದರ್ಶಿ ರೋಹಿದಾಸ್ ಕುಂದರ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಮೇಶ್ ಕುಮಾರ್ ಉಪಸ್ಥಿತರಿದ್ದರು.