ಪುತ್ತೂರು : ವಿಷ ಸೇವಿಸಿ ಕೂಲಿ ಕಾರ್ಮಿಕ ಆತ್ಮಹತ್ಯೆ
ಪುತ್ತೂರು, ಆ. 8: ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ಶಾಂತಿಗೋಡು ಗ್ರಾಮದ ಪೇರಡ್ಕ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೂಲಿ ಕಾರ್ಮಿಕರಾಗಿದ್ದ ಶಾಂತಿಗೋಡು ಗ್ರಾಮದ ಪೇರಡ್ಕ ನಿವಾಸಿ ದಾಮೋದರ (60) ಆತ್ಮಹತ್ಯೆ ಮಾಡಿಕೊಂಡವರು.
ಮದ್ಯ ವ್ಯಸನಿಯಾಗಿದ್ದ ದಾಮೋದರ ಅವರು ಪ್ರತಿದಿನ ಪಾನಮತ್ತರಾಗಿ ಮನೆಗೆ ಬಂದು ಪತ್ನಿ ಮತ್ತು ಮಕ್ಕಳ ಜತೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಬುಧವಾರ ಬೆಳಗ್ಗೆ ಪುರುಷರಕಟ್ಟೆಗೆ ಹೋಗಿ ವಿಪರೀತ ಮದ್ಯ ಸೇವಿಸಿ, ಮರಳಿ ಮನೆಗೆ ಬಂದಿದ್ದ ದಾಮೋದರ ಅವರು ಮಧ್ಯಾಹ್ನ ಊಟ ಮಾಡಿದ ಬಳಿಕ ಮನೆಯಿಂದ ಹೊರ ಹೋಗಿದ್ದರು. ಮರಳಿ ಸಂಜೆ ಮನೆಗೆ ಬಂದ ಅವರು ತಾನು ವಿಷ ಸೇವಿಸಿರುವುದಾಗಿ ಹೇಳಿಕೊಂಡಿದ್ದರು. ಆ ಬಳಿಕ ಕುಸಿದು ಬಿದ್ದು ಅಸ್ವಸ್ಥರಾದ ಅವರನ್ನು ಮನೆಮಂದಿ ಸೇರಿಕೊಂಡು ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಮೃತರ ಪುತ್ರ ಹರೀಶ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.