ದೇಶದಲ್ಲಿರುವ ತಾಳ್ಮೆ, ಸಹನೆ ಬೇರೆಲ್ಲೂ ಇಲ್ಲ: ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ ಕಂಬಾರರಿಗೆ ಸಾಹಿತ್ಯ ಸರಸ್ವತಿ ಸಮ್ಮಾನ್ ಪ್ರಶಸ್ತಿ
ಕಾಪು, ಆ. 8: ಭಾರತದಲ್ಲಿ ಇರುವಷ್ಟು ತಾಳ್ಮೆ, ಸಹನೆ ಬೇರೆ ಎಲ್ಲೂ ಇಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಬುಧವಾರ ಪಡುಕುತ್ಯಾರು ಆನೆಗುಂದಿ ಮಠದಲ್ಲಿ ಆನೆಗುಂದಿ ಮಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ಜನ್ಮವರ್ಧಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕೆಲವು ದೇಶಗಳಲ್ಲಿ ಒಂದು ದೇವರನ್ನು ನಿಭಾಯಿಸಲು ಅಸಾಧ್ಯ. ಅಂತಹದರಲ್ಲಿ ಭಾರತದಲ್ಲಿ ಹತ್ತು ಸಾವಿರ ವರ್ಷಗಳಿಂದ 33 ಕೋಟಿ ದೇವತೆಗಳನ್ನು ನಿಭಾಯಿಸಿದ್ದೇವೆ. ಅದರ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತಿದೆ. ಇಂತಹ ದೇಶದಲ್ಲಿ 64 ಸಾವಿರ ಜಾತಿಗಳು ಹಾಗೂ 12 ಕ್ಯಾಲೆಂಡರ್ಗಳನ್ನು ಹೊಂದಿದೆ ಎಂದರು.
ಅವರು ಭಾರತ ಬಹುತ್ವ ಹೊಂದಿದ ದೇಶವಾಗಿದೆ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಪ್ರಜೆಗಳ ಮಾತಿಗೆ ಬೆಲೆ ನೀಡಬೇಕು. ರಾಜಕಾರಣಿಗಳಿಗೆ ಧರ್ಮ ಮತ್ತು ವಿವೇಕವನ್ನು ಹೇಳಿದಾಗ ಭಾರತ ತಲೆಎತ್ತಿ ನಿಲ್ಲಲಿದೆ ಎಂದು ಕಂಬಾರ ನುಡಿದರು. ಪ್ರಶಸ್ತಿ ಪ್ರಧಾನ ಮಾಡಿದ ಆನೆಗುಂದಿ ಮಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ ಮಾತನಾಡಿ, ಬದುಕಿದ್ದಾಗ ಇನ್ನೊಬ್ಬರಿಗೆ ಸಂತಸ ನೀಡುವ ಒಂದು ವರ್ಗ ಹಾಗೂ ಬದುಕಿದ್ದಾಗ ಇನ್ನೊಬ್ಬರಿಗೆ ನೋವು ನೀಡುವ ಇನ್ನೊಂದು ವರ್ಗವೂ ಇದೆ. ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಅರಿತುಕೊಳ್ಳಬೇಕು. ಸಾರ್ಥಕ ಬದುಕಿನಿಂದ ಹುಟ್ಟು ಕೂಡಾ ಸಾರ್ಥಕವಾಗುತ್ತದೆ. ಕೃತಿ ರಚನೆ ಹಾಗೂ ಕಾರ್ಯಗಳೆರಡನ್ನೂ ಮಾಡಿದ ಕಂಬಾರರ ಬದುಕು ಯುವ ಪೀಳಿಗೆ ಮತ್ತು ನಮಗೆ ಆದರ್ಶ ಎಂದು ಹೇಳಿದರು.
ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯದ ಜನರಿದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರನ್ನು ಕಂಡಾಗ ನೋವಾಗುತ್ತಿದೆ. ಇತರ ಜನಾಂಗಗಳ ಸ್ವಾಮೀಜಿಯವರನ್ನು ಗೌರವಿಸುವಾಗ ನಾವೂ ಕೂಡಾ ನಮ್ಮ ಸಮಾಜದ ಸ್ವಾಮೀಜಿಯವರ ಕೈಗಳನ್ನು ಬಲಪಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕೆಪಿಸಿಸಿ ಇತರೆ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ವಿಶ್ವಕರ್ಮ ಹೇಳಿದರು.
ಇದೇ ಸಂದರ್ಭದಲ್ಲಿ ಜ್ಯೋತಿಷ್ಯ ವಿದ್ವಾನ್ ಪಡೀಲು ಉಮೇಶ್ ಆಚಾರ್ಯ ಅವರಿಗೆ ಆನೆಗುಂದಿ ಮಹಾ ಸಂಸ್ಥಾನದ ವಾಸ್ತು ಮತ್ತು ಜ್ಯೋತಿಷ್ಯ ವಿಭಾಗದ ಆಸ್ಥಾನ ವಿದ್ವಾನ್ ಪದವಿ ನೀಡಿ ಗೌರವಿಸಲಾಯಿತು.
ಬೆಂಗಳೂರು ನಗರ್ತಪೇಟೆ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ ಕಾರ್ಯದರ್ಶಿ ನಂದಗೋಪಾಲ ಆಚಾರ್ಯ, ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ ನಾಯಂಡನ ಹಳ್ಳಿಯ ಚಿಕ್ಕಣ್ಣ ಆಚಾರ್, ನಾಯಂಡನ ಹಳ್ಳಿ ಯೋಗೀಶ ಆಚಾರ್, ನಾಯಂಡನ ಹಳ್ಳಿ ನಾಗರಾಜ ಆಚಾರ್ಯ, ಕಾಂತರಾಜ್ ವಿಶ್ವಕರ್ಮ, ವಿಶ್ವಕರ್ಮ ಕೋ.ಸೊಸೈಟಿ ಬೆಂಗಳೂರು ಅಧ್ಯಕ್ಷ ಕೆ.ಎನ್.ಶ್ರೀನಿವಾಸ ವಿಶ್ವಕರ್ಮ, ಕೇಶವ ವೇದಪಾಠ ಶಾಲೆ ಸುಳ್ಯ ವೇ.ಮೂ. ನಾಗರಾಜ ಭಟ್, ಕಿಳಿಂಗಾರು ವೇ.ಮೂ.ಶಿವಶಂಕರ ಭಟ್, ದಿನೇಶ್ ಆಚಾರ್ಯ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರ.ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು ನಿರ್ವಹಿಸಿದರು. ಗೌರವ ಪ್ರ.ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಹಾಗೂ ನಿಟ್ಟೆ ಸುರೇಶ್ ಆಚಾರ್ ಸನ್ಮಾನ ಪತ್ರ ವಾಚಿಸಿದರು. ರತ್ನಾಕರ ಆಚಾರ್ಯ ಉಡುಪಿ ವಂದಿಸಿದರು.