ಜಗತ್ತಿನ ಪ್ರತಿಯೊಂದು ಅಂಶದಲ್ಲೂ ವಿಜ್ಞಾನವು ತುಂಬಿಕೊಂಡಿದೆ-ಯಸೊಬ್
ಫಿಲೋಮಿನಾದಲ್ಲಿ ‘ಬಾಹ್ಯಾಕಾಶ ವಿಜ್ಞಾನ’ ಸಂವಾದ
ಪುತ್ತೂರು, ಆ. 8: ವಿಜ್ಞಾನ ನಮ್ಮ ಜೀವನದಲ್ಲಿ ಹಾಸು ಹೋಕ್ಕಾಗಿದ್ದು ಜಗತ್ತಿನ ಪ್ರತಿಯೊಂದು ಅಂಶದಲ್ಲೂ ವಿಜ್ಞಾನವು ತುಂಬಿಕೊಂಡಿದೆ. ನಮ್ಮ ದೇಶ ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆಯ ಶಿಖರವನ್ನೇರಿದೆ. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೇ ವಿಜ್ಞಾನವಾಗಿದೆ ಎಂದು ಇಸ್ರೋ ಎಂ.ಸಿ.ಎಫ್ನ ಉಪ ವ್ಯವಸ್ಥಾಪಕರಾದ ಬಿ.ಯಸೊಬ್ ಹೇಳಿದರು.
ಅವರು ಬುಧವಾರ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ನ ವಿಜ್ಞಾನ ವೇದಿಕೆಯ ಆಶ್ರಯದಲ್ಲಿ ಕಾಲೇಜ್ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ ‘ಬಾಹ್ಯಾಕಾಶ ವಿಜ್ಞಾನದ ಕುರಿತು ಸಂವಾದ’ ಕಾರ್ಯಕ್ರಮದಲ್ಲಿ ಸಂಪನ್ಮೂ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಪ್ರಾಚೀನ ಕಾಲದಿಂದಲೂ ಪರಿಚಿತವಾದ ಕ್ಷೇತ್ರಗಳೇ ಆಗಿದೆ. ಬಾಹ್ಯಾಕಾಶ ವಿಜ್ಞಾನವು ಭಾರತದ ಆರ್ಥಿಕ ಸ್ಥಿತಿ ಮತ್ತು ಜನಜೀವನ ಸುಧಾರಿಸಲು ಬಾಹ್ಯಾಕಾಶ ಯೋಜನೆಗಳ ಕೊಡುಗೆ ಅಪಾರವಾಗಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಗಗನನಕ್ಷೆಗೆ ಬಿಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ 37 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ರಶ್ಯ ದಾಖಲೆ ಸ್ಥಾಪಿಸಿತ್ತು. ಈಗ ಭಾರತ ಆ ದಾಖಲೆಯನ್ನು ಅಳಿಸಿ ಹಾಕಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಗಗನನಕ್ಷೆಗೆ ಬಿಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅವಕಾಶಗಳ ಹೆಬ್ಬಾಗಿಲನ್ನು ತೆರೆದುಕೊಂಡಿದೆ. ಕಡಿಮೆ ಖರ್ಚು ವೆಚ್ಚದಲ್ಲಿ ಉಪಗ್ರಹ ಉಡಾವಣೆಗಾಗಿ ಖ್ಯಾತಿ ಪಡೆದಿರುವ ಇಸ್ರೋ ಇನ್ನು ಮುಂದೆ ಇನ್ನಷ್ಟು ದಾಖಲೆಗಳನ್ನು ಮುಡಿಗೇರಿಸಿಕೊಳ್ಳಲಿದೆ.
ದಿಕ್ಸೂಚಿ ಭಾಷಣ ಮಾಡಿದ ಸಂತ ಫಿಲೋಮಿನಾ ಕಾಲೇಜ್ನ ಕ್ಯಾಂಪಸ್ ನಿರ್ದೇಶಕ ಫಾ. ಆ್ಯಂಟನಿ ಪ್ರಕಾಶ್ ಮೊಂತೇರೋ ಅವರು ಜೀವನವು ವಿಜ್ಞಾನ, ತತ್ವಶಾಸ್ತ್ರ ಮತ್ತು ಧರ್ಮದೊಂದಿಗೆ ತುಂಬಿದೆ. ಇವುಗಳ ಬಗ್ಗೆ ಅಧ್ಯಯನಾಶಕ್ತಿಯನ್ನು ಬೆಳೆಸಿಕೊಂಡರೆ ನಾವು ನಿಜವಾದ ಮಾನವರಾಗಲು ಸಾಧ್ಯವಿದೆ. ತತ್ವಶಾಸ್ತ್ರವು ಆಶ್ಚರ್ಯಕರವಾಗಿದ್ದು ಇದು ನಿಜವಾದ ವಿಜ್ಞಾನಿಯನ್ನು ರೂಪಿಸಬಲ್ಲುದು. ಬಾಹ್ಯಾಕಾಶ ಮತ್ತು ವೈಜ್ಞಾನಿಕ ಸಂಶೋಧನೆ ಕ್ಷೇತ್ರದಲ್ಲಿ ಭಾರತ ದೇಶ ಇಂದು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ನಮ್ಮ ವಿಜ್ಞಾನಿಗಳ ಅಮೋಘ ಸಾಧನೆಯ ಬಗ್ಗೆ ದೇಶ ಹೆಮ್ಮೆ ಪಡಬೇಕಾಗಿದೆ. ಇಂತಹ ಸಾಧನೆಗೈಯಲು ವಿಷಯದ ಬಗೆಗಿನ ಅಧ್ಯಯನಾಶಕ್ತಿ, ಕಠಿಣ ಪರಿಶ್ರಮ, ಇಚ್ಛಾಶಕ್ತಿಯೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳೂ ಕೂಡ ಅವರವರ ಕ್ಷೇತ್ರಗಳಲ್ಲಿ ಅಧ್ಯಯನಾಶಕ್ತಿ, ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮವನ್ನು ರೂಢಿಸಿಕೊಂಡಾಗ ವಿಜ್ಞಾನಿಯಾಗಬಲ್ಲನು ಎಂದರು.
ಕಾಲೇಜ್ನ ಪ್ರಾಂಶುಪಾಲ ವಿಜಯ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಇಸ್ರೋದ ತಾಂತ್ರಿಕ ಅಧಿಕಾರಿ ಸ್ಟೀವನ್ ಮಿರಾಂಡ, ವಿಜ್ಞಾನ ಸಂಘದ ಸಂಯೋ ಜಕರಾದ ರವಿಪ್ರಸಾದ್ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ದಿವ್ಯಾ ಸ್ವಾಗತಿಸಿದರು. ತಕ್ಷಾ ವಂದಿಸಿದರು. ಡೆಲ್ಮಾ ಲೋರಾ ಡಿ’ಕುನ್ಹಾ ಕಾರ್ಯಕ್ರಮ ನಿರೂಪಿಸಿದರು.