ಆ. 15: ಎಸ್ಕೆಎಸ್ಎಸ್ಎಫ್ನಿಂದ ಸೌಹಾರ್ದ ಸಂಗಮ
ಮೂಡುಬಿದಿರೆ, ಅ.8: ಎಸ್ಕೆಎಸ್ಎಸ್ಎಫ್ ಮೂಡುಬಿದಿರೆ ವಲಯದ ವತಿಯಿಂದ ಆ 15ರಂದು ಸಂಜೆ 4 ಗಂಟೆಗೆ ಹಂಡೇಲು ಮಸೀದಿ ವಠಾರ ಫ್ರೀಡಂ ಸ್ಕ್ವೇರ್ ಎಂಬ ಸೌಹಾರ್ದ ಸಂಗಮವು ನಡೆಯಲಿದೆ ಎಂದು ಎಸ್ಕೆಎಸ್ಎಸ್ಎಫ್ನ ವಲಯ ಅಧ್ಯಕ್ಷ ಅಬ್ದುಲ್ ಅಜೀಜ್ ಮಾಲಿಕ್ ತಿಳಿಸಿದರು.
ಬುಧವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಎಸ್ಕೆಎಸ್ಎಸ್ಎಫ್ನ ಮೂಡುಬಿದಿರೆ ವಲಯದ 13 ಘಟಕಗಳ ಸದಸ್ಯರು, ಎಸ್ಕೆಎಸ್ಬಿವಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತೋಡಾರ್ ಸಂಶುಲ್ ಉಲಮಾ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪಡ್ಡಂದಡ್ಕ ಮಸೀದಿಯ ಖಲೇಚಿ ಇಸಕ್ ಫೈಝಿ ಮುಖ್ಯ ಭಾಷಣ ಮಾಡಲಿದ್ದು ಮಡಂತಾರು ಸೇಕ್ರೆಡ್ ಹಾರ್ಚ್ ಚರ್ಚ್ನ ಧರ್ಮಗುರು ರೇಫಾ ಬಾಸಿಲ್ವಾಸ್, ನಾರಾವಿ ಬಲ್ಯೊಟ್ಟುವಿನ ಶ್ರೀ ಶ್ರೀ ವಿಖ್ಯಾತನಂದ ಸ್ವಾಮಿಜಿ, ಮೂಡುಬಿದಿರೆ ಕೇಂದ್ರ ಜುಮ್ಮಾ ಮಸೀದಿಯ ಖಲೇಬ ಮುಸ್ತಾಫ ಯಮಾನಿ ಆಶೀರ್ವಚನ ನೀಡಲಿದ್ದಾರೆ. ಎಸ್ಕೆಎಸ್ಎಸ್ಎಫ್ನ ವಲಯ ಅಧ್ಯಕ್ಷ ಅಬ್ದುಲ್ ಅಜೀಜ್ ಮಾಲಿಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಸಿ. ಹೆಚ್. ಗಫೂರ್ ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಎಂ. ಎಲ್. ಉಪಾಧ್ಯಕ್ಷ ಅಬ್ದುಲ್ಲಾ ಕೋಟೆಬಾಗಿಲು, ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಬಶೀರ್, ವರ್ಕಿಂಗ್ ಕಾರ್ಯದರ್ಶಿ ಅಶ್ರಫ್ ಮರೋಡಿ ಉಪಸ್ಥಿತರಿದ್ದರು.