ಆ.12: ಕಲ್ಲಮುಂಡ್ಕೂರಿನಲ್ಲಿ ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ
ಮೂಡುಬಿದಿರೆ, ಆ. 8 : ಕಲ್ಲಮುಂಡ್ಕೂರು ವ್ಯ.ಸೇ.ಸ. ಸಂಘ, ಗ್ರಾ.ಪಂ. ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆ.12ರಂದು ಮುಂಜಾನೆ ಗಂ. 8.30ರಿಂದ ಕಲ್ಲಮುಂಡ್ಕೂರು ಮಾಣಿಲ ಮನೆಯ ಬಾಕಿಮಾರು ಗದ್ದೆ (ಕೊಂಕಣೆರೆ ಕಂಡ ಮತ್ತು ಶೇಣೆರೆ ಕಂಡ)ಯಲ್ಲಿ ನಾಲ್ಕನೇ ವರ್ಷದ ‘ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ’ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮುಖ್ಯ ಸಮಿತಿ ಕಾರ್ಯಾಧ್ಯಕ್ಷ ಗಂಗಾಧರ ಶೆಟ್ಟಿ ಕಲ್ಲಮುಂಡ್ಕೂರು ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. ಓಟದ ಕೋಣಗಳೊಂದಿಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕಣದತ್ತ ಬರಮಾಡಿಕೊಳ್ಳಲಾಗುವುದು. ‘ಕಲ್ಲಮುಂಡ್ಕೂರು ಅಗರ್ಜಾಲ ಬರ್ಕೆ ಸುಂದರ ಶೆಟ್ರೆನ ನೆಂಪುದ ಚಾವಡಿ’ಯಲ್ಲಿ ಉದ್ಯಮಿ ಎಂ.ಬಿ. ಕರ್ಕೇರ ಅವರು ಕಟೀಲು ಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರ ಆಶೀರ್ವಚನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿರುವರು.
ಸನ್ಮಾನ: ಮಾಜಿ ಸೈನಿಕ ಡೊಂಬಯ್ಯ ಪೂಜಾರಿ, ಗ್ರಾಮೀಣ ಪ್ರಸೂತಿ ತಜ್ಞೆ ಬಯ್ಯು ಬಾಯಿ ವಂಟಿಮಾರ್, ತೆಂಕಮಿಜಾರು, ನಾಟಿ ವೈದ್ಯೆ ಅಪ್ಪಿ ಮೊಲ್ದಿ , ವಜ್ರಬೆಟ್ಟು ಬಡಗ ಮಿಜಾರು ಅವರನ್ನು ಸಮ್ಮಾನಿಸಲಾಗುವುದು. ಬೆಳಗ್ಗೆ ಮತ್ತು ಸಂಜೆ ಲಘು ಉಪಾಹಾರ, ಮಧ್ಯಾಹ್ನ 3ರವರೆಗೆ ಗ್ರಾಮೀಣ ಶೈಲಿಯ ಊಟೋಪಚಾರ ಏರ್ಪಡಿಸಲಾಗಿದೆ. ನಿಧಿ ಶೋಧ, ಕಂಬಳ ಓಟ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಾಳೆ ಎಸೆತ, ಪುರುಷರು ಮತ್ತು ಮಹಿಳೆಯರಿಗೆ 100 ಮೀ., 200 ಮೀ. ಓಟ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಗೋಣಿ ಚೀಲ ಓಟ, ಮಹಿಳೆಯರಿಗೆ ತ್ರೋ ಬಾಲ್, ಕೊಡದಲ್ಲಿ ನೀರು ತರುವುದು, ಪುರುಷರಿಗೆ ಕಬಡ್ಡಿ, ವಾಲಿಬಾಲ್, ಪಿರಮಿಡ್ ಸ್ಪರ್ಧೆಗಳನ್ನು ಸಂಯೋಜಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಕೊಂಕಣೆರ ಕಂಡ ಮತ್ತು ಶೇಣೆರ ಕಂಡಗಳಲ್ಲಿ ಪ್ರತ್ಯೇಕವಾಗಿ ನಡೆಸಲಾಗುವುದು. ಸಂಜೆ ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕ ಬಿ. ಆರ್. ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಕಲ್ಲಮುಂಡ್ಕೂರು, ನಿಡ್ಡೋಡಿ, ಬಡಗ ಮಿಜಾರು ಮತ್ತು ತೆಂಕ ಮಿಜಾರು ಗ್ರಾಮಸ್ಥರಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖ್ಯಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಉಪಾಧ್ಯಕ್ಷರಾದ ಜೋಕಿಂ ಕೊರೆಯ, ಸುಖಾನಂದ ಶೆಟ್ಟಿ ಕೊಟ್ರಪಾಡಿ, ಅಲ್ಪೋನ್ಸ್ ಡಿ’ಸೋಜ ಮಂಜನಬೈಲು, ಪ್ರಚಾರ ಸಮಿತಿಯ ಅಶೋಕ್ ನಾಕ್ ಉಪಸ್ಥಿತರಿದ್ದರು.