ಪ್ರತ್ಯೇಕ ಪ್ರಕರಣ: ಮೂವರು ನಾಪತ್ತೆ
ಬ್ರಹ್ಮಾವರ, ಆ.8: ಆರೂರು ಗ್ರಾಮದ ನೀಲಾವರ ಕ್ರಾಸ್ ಐದು ಸೆಂಟ್ಸ್ ನಿವಾಸಿ ಪ್ರೇಮ್ಕುಮಾರ್ (51) ಎಂಬವರು ಆ.6ರ ಸೋಮವಾರ ಬೆಳಗ್ಗೆ 10:30ರಿಂದ 11ಗಂಟೆಯ ನಡುವೆ ಮನೆಯಿಂದ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ತಂಗಮಣಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ಜನತಾ ನಿವೇಶನದ ರಾಧಾ ಬಾಯಿ (70) ಎಂಬವರು ಜು.24ರಂದು ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೋದವರು ಇದುವರೆಗೆ ಮನೆಗೆ ಮರಳದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಸೋಮವಾರ ಅಪರಾಹ್ನ ಮಗನೊಂದಿಗೆ ಊಟ ಮಾಡಿದ್ದ 82ನೇ ಕುದಿ ಗ್ರಾಮದ ದರ್ಖಾಸು ಹೌಸ್ ನಿವಾಸಿ ರಾಮ ಮೂಲ್ಯ (69) ಆ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾರೆ. ಆ.6ರಂದು ಬೆಳಗ್ಗೆ ರಾಮ ಮೂಲ್ಯರ ಪತ್ನಿ ಲಲಿತಾ ಮೂಲ್ಯ ನಾಟಿ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ರಾಮಮೂಲ್ಯ ಹಾಗೂ ಮಗ ಅಶೋಕ ಉಳಿದುಕೊಂಡಿದ್ದರು.
ಲಲಿತಾ ನಾಟಿ ಮುಗಿಸಿ ಮನೆಗೆ ಬಂದು ನೋಡುವಾಗ ರಾಮ ಮೂಲ್ಯ ಮನೆಯಲ್ಲಿರಲಿಲ್ಲ. ಮಗನಲ್ಲಿ ಕೇಳಿದಾಗ ಒಂದು ಗಂಟೆಗೆ ನಾವಿಬ್ಬರೂ ಒಟ್ಟಿಗೆ ಊಟ ಮಾಡಿದ್ದು, ಆ ಬಳಿಕ ನಾನು ಮಲಗಿದ್ದೆ. ಮೂರು ಗಂಟೆಗೆ ಎದ್ದು ನೋಡುವಾಗ ತಂದೆ ಮನೆಯಲ್ಲಿರಲಿಲ್ಲ ಎಂದು ಹೇಳಿದ. ಆ ಬಳಿಕ ಅಕ್ಕಪಕ್ಕದಲ್ಲೆಲ್ಲಾ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.